ಬೆಂಗಳೂರು, ಎ.೪: ಪ್ರತಿ ಶನಿವಾರ ಒಂದು ಗಂಟೆ ಕಾಲ ಮಕ್ಕಳ ಕತೆಗಳನ್ನು ಶಾಲೆಗಳಲ್ಲಿ ಹೇಳಿಕೊಡುವ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ನಗರದಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಸಂರಕ್ಷಣೆ ಕುರಿತ “ಪುಟ್ಟ ಹೆಜ್ಜೆ ಸದ್ದು ಕೇಳಿ ಮಕ್ಕಳ ಕಥೆಗಳತ್ತ ಮರುಪ್ರಯಾಣ” ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಥೆಗಳನ್ನು ಹೇಳುವ ವಾತಾವರಣ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಕಥೆಗಳಿಂದ ಸೃಜನಶೀಲತೆ ಮತ್ತು ಸೌಹಾರ್ದತೆಯ ಬೆಳವಣಿಗೆ ಆಗುತ್ತದೆ. ಅದೇ ರೀತಿ ಕತೆಗಳು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದ ಎಂದು ಹೇಳಿದರು.
ಪ್ರಪಂಚದಲ್ಲಿ ಬೈಬಲ್ಗಿಂತ ಭಾರತದ ಪಂಚತಂತ್ರ ಕಥೆಗಳೇ ಹೆಚ್ಚಾಗಿ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಪಂಚದ ಕಥೆಗಳ ಸ್ವಭಾವ ನನಗೆ ಗೊತ್ತಿದೆ. ಆದರೆ ಭಾರತೀಯ ಜನಪದದಲ್ಲೇ ಹೆಚ್ಚು ಕಥೆಗಳು ಹುಟ್ಟಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಹೆಚ್ಚಾಗಿ ಸ್ತ್ರೀ ದೇವತೆಗಳಿವೆ. ಆದರೆ ನಮ್ಮಲ್ಲೇ ಹೆಚ್ಚಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ ಎಂದು ವಿಷಾದಿಸಿದ ಅವರು, ಬ್ರಿಟಿಷರ ಆಗಮನದಿಂದ ಸೃಜನಶೀಲನೆ, ಸಂಸ್ಕೃತಿ, ಆಚಾರ ವಿಚಾರಗಳು ಬಾಂಧ್ಯವ ಎಲ್ಲವೂ ನಾಶವಾಗಿದೆ. ಆದರೆ ನಾವು ಆತಂಕ ಪಡುವಷ್ಟರ ಮಟ್ಟಿದೆ ಅದು ನಾಶವಾಗಿಲ್ಲ ಎಂದು ಹೇಳಿದರು.
ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಗಂಗಾ ಎಂಬ ಧಾರವಾಹಿ ಬರುತ್ತಿದ್ದು, ೮-೧೦ ವರ್ಷದ ಬಾಲಕಿಗೆ ವಿಧವೆಯ ಪಾತ್ರ, ಮೌಢ್ಯಬಿತ್ತುವ ವಿಷಯ ಪ್ರಸಾರವಾಗುತ್ತಿದೆ. ಇದನ್ನು ನಾಗರಿಕ ಸಮಾಜ ವಿರೋಧಿಸುತ್ತಿಲ್ಲ ಎಂದು ವಿಷಾದಿಸಿದರು.
ಮಹಿಳಾ ಮತ್ತು ಮಕ್ಕ|ಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ವಿಜಯಶಂಕರ, ಕುಂ.ವಿ.ವೀರಭದ್ರಪ್ಪ, ಸೋನಿ ಕುಟ್ಟಿ ಜಾರ್ಜ್ ಮತ್ತಿತರರು ಹಾಜರಿದ್ದರು.
ಕರ್ನಾಟಕ