ಸಿಹಿಕಹಿ ಚಂದ್ರು ಈಗ ಮತ್ತೆ “ಬೊಂಬಾಟ್ ಭೋಜನ’ದೊಂದಿಗೆ ವಾಪಸ್ಸಾಗಿದ್ದಾರೆ. ಹಾಗಂತ ಅವರು ಈ ಕಾರ್ಯಕ್ರಮವನ್ನು ಮತ್ತೂಮ್ಮೆ ನಡೆಸಿಕೊಡುತ್ತಿದ್ದಾರೆ ಎಂದು ತಿಳಿಯಬೇಡಿ. ಚಂದ್ರು ಈ ಬಾರಿ “ಬೊಂಬಾಟ್ ಭೋಜನ’ ಎಂಬ ಬ್ರಾಂಡ್ ಹುಟ್ಟು ಹಾಕಿದ್ದಾರೆ.
ಈ ಮೂಲಕ ಅವರು ಹಲವು ತಿನಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಎಂ.ಟಿ.ಆರ್, ಮೈಯ್ನಾಸ್ ಮುಂತಾದವರ ಜೊತೆಗೆ ಸ್ಪರ್ಧೆಗೆ ಇಳಿದಿದ್ದಾರೆ.
ಎಲ್ಲಾ ಸರಿ, “ಬೊಂಬಾಟ್ ಭೋಜನ’ ಬ್ರಾಂಡ್ನಡಿ ಚಂದ್ರು ಏನೇನೆಲ್ಲಾ ತಿನ್ನಿಸುವುದಕ್ಕೆ ರೆಡಿಯಾಗಿದ್ದಾರೆ ಎಂಬ ಪ್ರಶ್ನೆ ಬರಬಹುದು. ಚಂದ್ರು “ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ, ಆ ನಂತರ ಪುಸ್ತಕದಲ್ಲೂ ಒಂದೊಂದು ತಿಂಡಿಗೆ, ರಸವತ್ತಾದ ಹೆಸರುಗಳನ್ನು ಇಟ್ಟಿದ್ದರು. ಈಗ ಅದನ್ನೇ ಮುಂದುವರೆಸಿದ್ದಾರೆ.
ತಮ್ಮ ಬ್ರಾಂಡ್ ಮೂಲಕ ಹೊರತರುತ್ತಿರುವ ತಿನಿಸಿಗಳು ಮತ್ತು ಪುಡಿಗಳಿಗೆ ಅವರು ವಿಭಿನ್ನವಾದ ಹೆಸರುಗಳನ್ನು ಇಟ್ಟಿದ್ದಾರೆ. ಜನ್ನತ್ ಜಾಮೂನ್, ಬಲಿಷ್ಠ ಬಾದಾಮ್, ಸಖತ್ ಸಾಂಬಾರ್, ರಂಗೀಲಾ ರಸಮ್, ಟೊಮೇಟೋಗರೆ, ಕೂಟು ಸಾಂಬಾರ್, ರಸಿಕ ರಸಮ್, ಚಮತ್ಕಾರ್ ಚಟ್ನಿ ಮುಂತಾದ ಹೆಸರುಗಳ ತಿನಿಸಿಗಳು ಮತ್ತು ಪುಡಿಗಳನ್ನು ಅವರು ತಮ್ಮ “ಬೊಂಬಾಟ್ ಭೋಜನ’ ಮೂಲಕ ಹೊರಬಿಡುತ್ತಿದ್ದಾರೆ. ಈ ಎಲ್ಲಾ ತಿನಿಸುಗಳನ್ನು ಸಾಕಷ್ಟು ಪರೀಕ್ಷೆ ಮಾಡಿ, ಜನರಿಗೆ ಉಣಬಡಿಸುತ್ತಿದ್ದಾರೆ ಅವರು.
ಈ ಎಲ್ಲಾ ತಿನಿಸುಗಳು ಏಪ್ರಿಲ್ ಐದರ ನಂತರ, ಎಲ್ಲಾ ರೀಟೇಲ್ ಅಂಗಡಿಯಲ್ಲೂ ಸಿಗುತ್ತದಂತೆ. ತಮ್ಮ ಹೊಸ ಬ್ರಾಂಡ್ನ ನಿಲ್ಲಿಸುವುದಕ್ಕೆ ಸಹಾಯ ಮಾಡಿ ಎಂದು ಚಂದ್ರು ತಮ್ಮ ಫೇಸ್ಬುಕ್ನಲ್ಲಿ ಮೆಸೇಜ್ ಹಾಕಿದ್ದಾರೆ. ಚಂದ್ರು ಕೈಹಿಡಿಯುತ್ತೀರಿ ತಾನೇ?
-ಉದಯವಾಣಿ