ಬೆಂಗಳೂರು, ಏ. ೪- ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಸ್ವೀಕರಿಸಲು ತಾವು ನಿರಾಕರಿಸಿರುವುದಾಗಿ ವಿದ್ವಾಂಸ ಪ್ರೊ. ಜಿ. ರಾಮಕೃಷ್ಣ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಪತ್ರ ಬರೆದಿದ್ದಾರೆ.
ಪ್ರಸಕ್ತ ಸಾಲಿನ ಸಾಹಿತ್ಯ ಅಕಾಡೆಮಿ ನೀಡಲು ಪ್ರೊ. ಜಿ. ರಾಮಕೃಷ್ಣ ಅವರ ಹೆಸರನ್ನು ಪರಿಗಣಿಸಿ ಪ್ರಶಸ್ತಿ ನೀಡಲು ಮುಂದಾದ ಸಾಹಿತ್ಯ ಅಕಾಡೆಮಿಗೆ ತಾವು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಪತ್ರದ ಮುಖೇನ ತಿಳಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಸಾಹಿತ್ಯ ಲೋಕದಲ್ಲಿ ನಡೆದ ಹಲವಾರು ಘಟನೆಗಳಿಂದ ಮನನೊಂದು ಪ್ರಶಸ್ತಿ ಸ್ವೀಕರಿಸಲು ನಿರ್ಧರಿಸಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರದ ಸಾಂಸ್ಕೃತಿಕ ವಿರೋಧಿ ನೀತಿ, ಡಾ. ಎಂ.ಎಂ.ಕಲ್ಬುರ್ಗಿ ಅವರ ಕೊಲೆ, ದಕ್ಷಿಣ ಕನ್ನಡದಲ್ಲಿ ಜಾತಿ ಆಧಾರಿತ ಸರ್ಕಾರದ ನೀತಿ, ಅಲ್ಲದೇ ಸಾಹಿತ್ಯ ಅಕಾಡೆಮಿ ಸ್ವಾಯತ್ತವಾಗಿದ್ದರೂ ಸಹ ಸರ್ಕಾರದ ನೆರಳಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವ ಕಾರಣ ನಾನು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸುತ್ತಿದ್ದೇನೆ.
ಅಷ್ಟೇ ಅಲ್ಲದೇ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಏಣಿಸುತ್ತಿರುವುದು ನನಗೆ ಅತೃಪ್ತಿಯನ್ನು ಉಂಟು ಮಾಡಿರುವ ಕಾರಣ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಧರಿಸಿರುವುದಾಗಿ ರಾಮಕೃಷ್ಣ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ