ಮೈಸೂರು: ಪತ್ನಿಯ ಕಿರುಕುಳ ತಡೆಯಲಾರದೆ ವೆಂಕಟೇಶ್ ಎಂಬ ವ್ಯಕ್ತಿ ತೆಂಗಿನ ಮರ ಏರಿ ಕುಳಿತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಮೈಸೂರಿನ ಸರಸ್ವತಿ ಪುರಂ ನಲ್ಲಿ ನಡೆದಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮರವೇರಿ ಕುಳಿತಿರುವ ವ್ಯಕ್ತಿಯನ್ನು ಕೆಳಗಿಳಿಯುವಂತೆ ಮನವೊಲಿಕೆ ಮಾಡುತ್ತಿದ್ದಾರೆ. ಮರದಿಂದ ಕೆಳಗಿಳಿಯಲು ನಿರಾಕರಿಸಿರುವ ವೆಂಕಟೇಶ್ ಪತ್ನಿ ಹೊಡೆಯುತ್ತಾಳೆ, ಕಿರುಕುಳ ನೀಡುತ್ತಾಳೆ ಎಂದು ಆರೋಪಿಸಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಅವರ ಪತ್ನಿ ಸುಶೀಲಾ, ಪತಿಗೆ ಮಾನಸಿಕ ಸಮಸ್ಯೆ ಇದೆ. ಅವರ ಹೆಸರಿನಲ್ಲೇ ಆಸ್ತಿ ಇದ್ದು, ಮಾನಸಿಕ ಸಮಸ್ಯೆ ಎದುರಿಸುತ್ತಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ವೆಂಕಟೇಶ್ ನ ಸಂಬಂಧಿಕರು ಸಹ ಆತನನ್ನು ಮರ ಇಳಿಯುವಂತೆ ಮನವೊಲಿಕೆ ಮಾಡಲು ಯತ್ನಿಸುತ್ತಿದ್ದಾರೆ. ಯಾವುದೇ ಮನವೊಲಿಕೆಗೂ ಜಗ್ಗದ ವೆಂಕಟೇಶ್ ರೆಬೆಲ್ ಸ್ಟಾರ್ ಅಂಬರೀಶ್ ಬಂದರೇನೆ ಮರದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾನೆ.