ಬಂಗಾರಪೇಟೆ: ಚಿಕಿತ್ಸೆಗೆಂದು ರೈಲಿನಲ್ಲಿ ಬಿಹಾರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಹೃದಯಾಘಾತವಾಗಿ ರೈಲಿನಲ್ಲಿಯೇ ಮೃತಪಟ್ಟಿರುವ ದುರ್ಘಟನೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಾಲಿ ಷಾ(೨೨) ಮೃತಪಟ್ಟ ದುರ್ದೈವಿ. ಬಿಹಾರದ ಅಜೀಪುರ ತಾಲೂಕಿನ ಗಾಡಿಬಜಾರ್ನಲ್ಲಿನ ನಿವಾಸಿಯಾದ ಮಾಲಿ ಷಾ ಅವರು ಕೆಲ ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸಮಸ್ಯೆ ಬಿಗಡಾಯಿಸಿದ ಪರಿಣಾಮ ಸ್ಥಳೀಯ ವೈದ್ಯರು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ಪತಿ ಸುನೀಲ್ ಷಾ ಅವರು ತಮ್ಮ ಪತ್ನಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿನತ್ತ ಕರೆ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಪತ್ನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಬಿಹಾರ-ಗುವಾಹಟಿ ರೈಲಿನಲ್ಲಿ ಬೆಂಗಳೂರಿನತ್ತ ಚಲಿಸುತ್ತಿದ್ದಾಗ ಇಂದು ಬೆಳಗ್ಗೆ ಜೋಲಾರ್ ಪೇಟೆ ಸಮೀಪದಲ್ಲಿ ಘಟನೆ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ರೈಲ್ವೆ ಅಧಿಕಾರಿಗಳು ವೈದ್ಯರೊಂದಿಗೆ ನೆರವಿಗೆ ಮುಂದಗಿದ್ದಾರೆ. ಅಷ್ಟರಲ್ಲಿ ಮಾಲಿ ಷಾ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ಬಂಗಾರಪೇಟೆ ಪೋಲಿಸ ಅಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.