ಕೊಪ್ಪಳ: ದೇವಸ್ಥಾನಕ್ಕೆ ಹೋಗಿ ದೇವರ ಬಳಿ ಮೊರೆ ಇಡುವುದು, ಬೇಡಿಕೊಳ್ಳುವುದು ಎಲ್ಲರೂ ಮಾಡುವ ಕೆಲಸ. ಆದರೆ, ಇಲ್ಲೊಬ್ಬ ಯುವಕ ದೇವರಿಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ತನ್ನ ಪ್ರೇಯಸಿಯೊಂದಿಗೆ ಮದುವೆಯಾಗುವಂತೆ ಮಾಡು ಆಕೆಯೊಂದಿಗೆ ಬಂದು ಅಭಿಷೇಕ ಮಾಡಿಸುತ್ತೇನೆಂದು ಹೇಳಿ ದೇವರ ಹುಂಡಿಗೆ ಹಾಕಿದ್ದಾನೆ.
ಕೊಪ್ಪಳದ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿರುವ ಕನಕಾಚಲ ದೇವಸ್ಥಾನದ ಹುಂಡಿಯಲ್ಲಿ ಈ ಪತ್ರ ದೊರಕಿದ್ದು, ಇದೀಗ ಗ್ರಾಮದಾದ್ಯಂತ ಸುದ್ದಿಯನ್ನು ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವಿರುವುದರಿಂದ ದೇವಸ್ಥಾನ ಆಡಳಿತ ಮಂಡಳಿಯವರು ಹಣವನ್ನು ಎಣಿಕೆ ಮಾಡಲು ಹುಂಡಿಯನ್ನು ತೆಗೆದಿದ್ದಾರೆ. ಈ ವೇಳೆ ಹಣದ ಜೊತೆ ಪತ್ರವಿರುವುದು ಕಂಡು ಬಂದಿತ್ತು ಎಂದು ಅರ್ಚಕರು ಹೇಳಿದ್ದಾರೆ.
ಯುವಕ ಬರೆದಿರುವ ಪತ್ರದಲ್ಲಿ ದೇವರೇ ನನ್ನ ಪ್ರೇಯಸಿ ನನ್ನೊಂದಿಗೆ ಮುನಿಸಿಕೊಂಡಿದ್ದಾಳೆ. ಯಾವ ಕಾರಣಕ್ಕೆಂದು ಗೊತ್ತಿಲ್ಲ. ಆಕೆ ನನಗೆ ಫೋನ್ ಮಾಡುವಂತೆ ಮಾಡು. ಆಕೆಯೊಂದಿಗೆ ವಿವಾಹವಾಗುವಂತೆ ಮಾಡಿದರೆ, ಇಬ್ಬರು ಜೊತೆಯಲ್ಲಿ ನಿಂತು ಅಭಿಷೇಕವನ್ನು ಮಾಡಿಸುತ್ತೇವೆ. ನನಗೆ ಸರ್ಕಾರಿ ಉದ್ಯೋಗ ಸಿಗುವಂತೆ ಮಾಡು ಎಂದು ಕೇಳಿಕೊಂಡಿದ್ದಾನೆ.