ಮಂಗಳೂರು : ಫೆಬ್ರವರಿ 29ರಂದು ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಅಪರಿಚಿತ ವ್ಯಕ್ತಿಯೋರ್ವರ ಕೊಲೆ ನಡೆದಿದ್ದು, ದಿನಾಂಕ 05-03-2016 ರಂದು ಮೃತ ವ್ಯಕ್ತಿಯು ಅತ್ತಾವರ ನಂದಿಗುಡ್ಡ ನಿವಾಸಿ ಜಯಾನಂದ @ ಜಯ ಅಮ್ಮಣ್ಣ ( 50 ) ಎಂದು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿರುತ್ತಾರೆ.
ಇದೀಗ ಜಯಾನಂದ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಪಂಪುವೆಲ್, ನಾಗುರಿ ರಸ್ತೆಯ ಕಪಿತಾನಿಯಾ ಶಾಲೆಯ ಬಳಿ ವಾಸ್ತವ್ಯ ಹೊಂದಿರುವ ಮೂಲತಹ ಪುತ್ತೂರು ತಾಲೂಕಿನ ಮುದ್ದೋಡಿ ಮನೆ ನಿವಾಸಿ ರವಿ @ ರವೀಂದ್ರ ಸಾಲಿಯಾನ್ (35) ಹಾಗೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಿವಾಸಿ ನವೀನ ( 20 ) ಎಂದು ಗುರುತಿಸಲಾಗಿದೆ.ಆರೋಪಿಗಳನ್ನು ಪಂಪ್ ವೆಲ್ ಮತ್ತು ಬಿಜೈ ಕೆ.ಎಸ್.ಆರ್.ಟಿ.ಸಿ. ಬಳಿ ಈ ದಿನ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಸೆಂಟ್ರಲ್ ಮಾರ್ಕೆಟ್ ನ ಎಎಸ್ ಕೆ ವೆಜ್ ಎಲೈಟ್ ಸೆಂಟರ್ ನ ಬಳಿ ದಿನಾಂಕ 29-02-2016 ರಂದು ಜಯಾನಂದ ಅವರನ್ನು ರಾತ್ರಿ ವೇಳೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಜಯಾನಂದ@ಜಯ ಅಮ್ಮಣ್ಣ ರವರನ್ನು ಆರೋಪಿಗಳು ಕುಡಿದ ಮತ್ತಿನಲ್ಲಿ ಜಗಳ ಪ್ರಾರಂಭಿಸಿ ಕೊಲೆಗೈಯುವಲ್ಲಿ ಕೃತ್ಯವು ಅಂತ್ಯಗೊಂಡಿದೆ ಎಂದು ಕಮಿಷನರ್ ವಿವರಿಸಿದರು.
ಸದರಿ ಕೊಲೆ ಪ್ರಕರಣದಲ್ಲಿ ಗೊತ್ತಿರದ ಮೃತ ವ್ಯಕ್ತಿ ಹಾಗೂ ಗೊತ್ತಿರದ ಕೊಲೆಯ ದುಷ್ಕರ್ಮಿಗಳನ್ನು ಪತ್ತೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯ ವೈಖರಿಯನ್ನು ಪೊಲೀಸ್ ಆಯುಕ್ತ ಶ್ರೀ ಚಂದ್ರಶೇಖರ್ ರವರು ಸೂಕ್ತ ಬಹುಮಾನವನ್ನು ನೀಡಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಉತ್ತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಶಾಂತಾರಾಮ, ಸಿಬ್ಬಂದಿಗಳಾದ ಎ.ಎಸ್ಐ. ವಸಂತ್, ರಾಜೇಶ್ ಆಳ್ವ, ಸುಜನ್ ಶೆಟ್ಟಿ, ಗೋವರ್ಧನ್ ರವರುಗಳ ತಂಡ ಆರೋಪಿಗಳನ್ನು ಪತ್ತೆ ಕಾರ್ಯ ನಡೆಸಿದೆ ಎಂದು ಅಯುಕ್ತರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್. ಶಾಂತರಾಜು ಹಾಗೂ ಡಾ. ಸಂಜೀವ ಎಮ್. ಪಾಟೀಲ್ ಉಪಸ್ಥಿತರಿದ್ದರು.