(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ದೇವಸ್ಥಾನ ನಿರ್ಮಾಣ ವಿಚಾರದಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಮುಂದಿನ ಒಂದೂವರೆ ವರ್ಷದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು. ಅಲ್ಲದೇ ಆರ್ಥಿಕವಾಗಿ ಸಂಪನ್ಮೂಲ ಕ್ರೋಢೀಕರಣ ಕಾರ್ಯಕ್ಕೆ ಸಮಾಜದ ಸ್ಥಳೀಯ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು, ಈ ನಿಟ್ಟಿನಲ್ಲಿ ಸಮಾಜಬಂಧುಗಳು ನಮ್ಮಜೊತೆ ಕೈಜೋಡಿಸಬೇಕೆಂದು ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ಸಂಜೆ ಬಾರಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನ ವಠಾರದಲ್ಲಿ ಜರುಗಿದ ದೇವಸ್ಥಾನ ನಿರ್ಮಾಣ ಸಮಿತಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಏಕನಾಥೇಶ್ವರೀ ದೇವಸ್ಥಾನ ನಿರ್ಮಾಣ ಸಮಿತಿ ಗೌರವ ಸಲಹೆಗಾರ ಎಚ್. ಮೋಹನದಾಸ್ ಮಾತನಾಡಿ, ದೇವಾಡಿಗ ಸಮಾಜದ ಈ ದೇವಸ್ಥಾನ ನಿರ್ಮಾಣಕ್ಕೆ ಸಂಬಂದಪಟ್ಟ ಯಾವುದೇ ಚರ್ಚೆಗಳು ಒಂದು ವೇದಿಕೆಯಲ್ಲಿ ಮಾತ್ರವೇ ಸೀಮಿತವಾಗಿರಬೇಕಿದೆ. ಅನಗತ್ಯ ಚರ್ಚೆಗಳ ಬದಲಾಗಿ ಸಂಘಟಿತ ಕಾರ್ಯವನ್ನು ಮಾಡುವ ಅಗತ್ಯವಿದೆ ಅಭಿಪ್ರಾಯಪಟ್ಟರು.
ಶ್ರೀ ಏಕನಾಥೆಶ್ವರೀ ದೇವಸ್ಥಾನದ ಟ್ರಸ್ಟಿ ದಿನೇಶ್ ದೇವಾಡಿಗ ದುಬೈ ಮಾತನಾಡಿ, ಸಮಾಜದ ಎಲ್ಲರೂ ಒಂದಾಗಿ ಶಾಶ್ವತ ದೇವಸ್ಥಾನ ನಿರ್ಮಾಣ ಉದ್ದೇಶವನ್ನಿಟ್ಟುಕೊಂಡು ವಿದೇಶದಲ್ಲಿಯೂ ಈ ವಿಚಾರದ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಈ ಕಾರ್ಯ ಮುಗಿಯುವವರೆಗೂ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಎಲ್ಲರೂ ಒಂದು ಕೋಶವಾಗಿ ಕಾರ್ಯಮಾಡಬೇಕಿದೆ. ಎಲ್ಲರ ಹ್ರದಯದಲ್ಲಿಯೂ ದೇವಸ್ಥಾನಕ್ಕೆ ಸಂಬಂದಪಟ್ಟ ಉತ್ತಮ ವಿಚಾರಧಾರೆಗಳು ವ್ಯಕ್ತವಾದಾಗ ಮಾತ್ರವೇ ಉದ್ದೇಶಿತ ಕಾರ್ಯ ಸುಗಮವಗಿ ನಡೆಯಲಿದೆ ಎಂದು ಟ್ರಸ್ಟಿ ಮತ್ತು ಕೋಶಾಧಿಕಾರಿ ಜನಾರ್ಧನ ದೇವಾಡಿಗ ಹೇಳಿದರು.
ಟ್ರಸ್ಟಿ ಹಾಗೂ ನಿರ್ಮಾಣ ಸಮಿತಿ ಉಪಾಧ್ಯಕ್ಷ ಜನಾರ್ಧನ ದೇವಾಡಿಗ ಉಪ್ಪುಂದ ಮಾತನಾಡಿ, ಸಂಘಟನೆ ಹಾಗೂ ಸಮಾಜದ ಜನರನ್ನು ಇನ್ನಷ್ಟು ಒಗ್ಗೂಡಿಸುವ ನಿಟ್ಟಿನಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯವಾಗುತ್ತಿದೆ, ಎಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಿದಾಗ ಮಾತ್ರವೇ ನಿಗದಿತ ಸಮಯದಲ್ಲಿ ದೇವಸ್ಥಾನ ನಿರ್ಮಾಣ ಸಾಧ್ಯವಿದೆ. ಇದಕ್ಕಾಗಿ ಅವಿರತ ಶ್ರಮ ಅತ್ಯಗತ್ಯ ಎಂದರು.
ದೇವಸ್ಥಾನದ ಪ್ರಮುಖ ಧಾರ್ಮಿಕ ಕಾರ್ಯವಾಗಿರುವ ನಿಧಿಕುಂಭ ಸ್ಥಾಪನೆ ಕಾರ್ಯವನ್ನು ಎ.20ರಂದು ಸಕಲ ವಿಧಿವಿಧಾನದೊಂದಿಗೆ ನಡೆಸುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೇ ದೇವಳ ನಿರ್ಮಾಣದಲ್ಲಿ ಮುಂದಿನ ಅಭಿವೃದ್ಧಿ ವಿಚಾರಗಳು, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ದೇವಳದ ಪೌಳಿ, ಮರಕೆತ್ತನೆ ಮೊದಲಾದ ವಿಚಾರದ ಬಗ್ಗೆ ಅಭಿಪ್ರಾಯವನ್ನು ಚರ್ಚಿಸಿ ನೆರೆದ ಸಮಾಜಬಾಂಧವರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಇನ್ನಷ್ಟು ಅನುಕೂಲವಾಗುವಂತೆ ಹಾಗೂ ಭೇಟಿ ನೀಡುವ ಸಮಾಜದ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಘದ ಕಛೇರಿಯನ್ನು ದೇವಸ್ಥಾನ ಸಮೀಪವೇ ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಪದಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಶ್ರೀ ಏಕನಾಥೇಶ್ವರೀ ದೇವಸ್ಥಾನ ನಿರ್ಮಾಣ ಸಮಿತಿ ಪ್ರಧಾನಕಾರ್ಯದರ್ಶಿ ಹಾಗೂ ವಿಶ್ವಸ್ಥ ನರಸಿಂಹ ದೇವಾಡಿಗ ಅವರು ದೇವಸ್ಥಾನದ ನಿರ್ಮಾಣದ ಬಗೆಗಿನ ಸಂಪೂರ್ಣ ಮಾಹಿತಿ ನೀಡಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.