ಚಾಲಕ್ಕುಡಿ (ಕೇರಳ): ಮಾರ್ಚ್ 6 ರಂದು ಕೊಚ್ಚಿಯಲ್ಲಿ ಸಾವಿಗೀಡಾದ ಮಲಯಾಳಂ ನಟ ಕಲಾಭವನ ಮಣಿ ಸಾವಿಗೆ ಸಂಬಂಧಿಸಿದಂತೆ ಹಲವು ನಿಗೂಢ ರಹಸ್ಯಗಳು ಬಯಲಾಗತೊಡಗಿವೆ. ಈ ಹಿಂದೆ ಕಲಾಭವನ ಮಣಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಮಣಿಯ ದೇಹದಲ್ಲಿ ಕೀಟನಾಶಕ, ಎಥೆನಾಲ್ ಮತ್ತು ಮೆಥನಾಲ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಕೊಚ್ಚಿಯ ಕಾಕನಾಡ್ ರೀಜಿನಲ್ ಕೆಮ್ಕಲ್ ಎಕ್ಸಾಮಿನರ್ಸ್ ಲ್ಯಾಬೋರೇಟರಿಯಲ್ಲಿ ಟಾಕ್ಸಿಕೋಲಜಿ ಪರೀಕ್ಷೆ ನಡೆಸಿದ್ದು, ಮಣಿಯ ದೇಹದಲ್ಲಿ ರಾಸಾಯನಿಕ ಪದಾರ್ಥದ ಅಂಶಗಳು ಪತ್ತೆಯಾಗಿರುವುದನ್ನು ದೃಢೀಕರಿಸಲಾಗಿದೆ.
ಕರುಳು ರೋಗದಿಂದ ಬಳಲುತ್ತಿದ್ದ ಮಣಿ ಈ ರೀತಿ ಸಾವಿಗೀಡಾಗಿರುವ ಬಗ್ಗೆ ನಮಗೆ ಸಂಶಯ ಇದೆ ಎಂದು ಮಣಿಯ ಪತ್ನಿ ನಿಮ್ಮಿ ಹೇಳಿರುವುದರಿಂದ ಈ ರಾಸಾಯನಿಕ ಪರೀಕ್ಷೆ ನಡೆಸಲಾಗಿತ್ತು. ನಿಗೂಢ ಸಾವು ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು, ಮಣಿಯ ಸ್ನೇಹಿತರನ್ನು ವಿಚಾರಣೆಗೊಳಪಡಿಸಲಾಗಿದೆ.