ಬೆಂಗಳೂರು,ಮಾ.೧೫-ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಆರ್.ಮನೋಹರ್,ಡಿ.ಯು.ಮಲ್ಲಿಕಾರ್ಜುನ ಹಾಗೂ ಗೋವಿಂದರಾಜು ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಇಂದು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಆದಾಯ ವಂಚನೆಯ ಹಿನ್ನಲೆಯಲ್ಲಿ ಈ ಮೂವರು ವಿಧಾನಪರಿಷತ್ತಿನ ಸದಸ್ಯರ ಕಚೇರಿ ಮನೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ದಾಖಲೆಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿರುವ ಗೋವಿಂದರಾಜು ಅವರ ಇಂದಿರಾನಗರದ ಮನೆ,ಜೆಡಿಎಸ್ ಮುಖಂಡರಾದ ಮನೋಹರ್ ಅವರ ಸರ್ಜಾಪುರದ ನಿವಾಸ,ಪಕ್ಷೇತರ ಸದಸ್ಯರಾದ ಡಿ,ಯು.ಮಲ್ಲಿಕಾರ್ಜುನ ಅವರ ಡಾಲರ್ಸ್ ಕಾಲೋನಿಯ ಮನೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಆದಾಯ ಇಲಾಖೆ ಅಧಿಕಾರಿಗಳ ತಂಡ ಮೂವರ ಮನೆ ಕಚೇರಿಗಳ ಮೇಲೆ ದಾಳಿ ನಡೆಸಿ ಆದಾಯ ಪಾವತಿಸದ ಆಸ್ತಿಪಾಸ್ತಿಗಳ ವಿವರ ಕಲೆಹಾಕಿದ್ದಾರೆ.ದಾಳಿಯ ಹಿನ್ನಲೆಯಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಸಿ.ಆರ್.ಮನೋಹರ್,ಡಿ.ಯು.ಮಲ್ಲಿಕಾರ್ಜುನ ಹಾಗೂ ಗೋವಿಂದರಾಜು ಅವರು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಲೋಕಾಯುಕ್ತರ ಬಳಿ ಕೋಟ್ಯಂತರ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ದಾಖಲೆಗಳನ್ನು ನೀಡಿದ್ದಾರೆ.
ಜೆಡಿಎಸ್ ಮುಖಂಡರಾಗಿರುವ ಸಿಆರ್ ಮನೋಹರ್ ಚಿತ್ರ ನಿರ್ಮಾಣದಲ್ಲೂ ತೊಡಗಿದ್ದಾರೆ, ಇತ್ತೀಚಿಗಷ್ಟೇ ಸುದೀಪ್ ಹಾಗೂ ಶಿವರಾಜ್ಕುಮಾರ್ ಅವರು ಅಭಿನಯಿಸುತ್ತಿರುವ ಕಲಿ ಚಿತ್ರವನ್ನು ಬರೋಬರಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ,ಇದಕ್ಕೂ ಮೂದಲು ಸ್ಕೂಲ್ ಮೇಷ್ಟ್ರು,ಬಸವಣ್ಣ ಚಿತ್ರಗಳನ್ನು ಅವರು ನಿರ್ಮಿಸಿದ್ದರು.