ಬೆಂಗಳೂರು: ‘ಜಗ್ಗು ದಾದ’ನಿಗೆ ಕೊನೆಯ ಹಂತದ ಚಿತ್ರೀಕರಣ ನಡೆಸುತ್ತಿರುವ ನಿರ್ದೇಶಕ ರಾಘವೇಂದ್ರ ಹೆಗಡೆ, ಸಾಮಾನ್ಯವಲ್ಲದ ಕೈಮ್ಯಾಕ್ಸ್ ಚಿತ್ರೀಕರಣಕ್ಕೆ ಅಣಿಯಗುತ್ತಿದ್ದಾರೆ.
“ರೊಮ್ಯಾಂಟಿಕ್ ಹಾಸ್ಯಚಿತ್ರವಾಗಿರುವ ‘ಜಗ್ಗು ದಾದಾ’ಗೆ ನಗು ಉಕ್ಕಿಸುವ ಆಕ್ಷನ್ ದೃಶ್ಯಗಳುಳ್ಳ ಹಾಸ್ಯಮಯ ಕ್ಲೈಮ್ಯಾಕ್ಸ್ ಇದೆ. ಈ ಕ್ಲೈಮ್ಯಾಕ್ಸ್ ನಲ್ಲಿ ಇಡಿ ತಾರಾಗಣವೇ ಭಾಗಿಯಾಗುತ್ತದೆ. ದರ್ಶನ್, ನಾಯಕ ನಟಿ ದೀಕ್ಷಾ ಸೇಥ್, ಊರ್ವಶಿ, ಅನಂತ ನಾಗ್, ಅಚ್ಯುತ್ ಕುಮಾರ್, ಬುಲೆಟ್ ಪ್ರಕಾಶ್, ಸೃಜನ್ ಲೋಕೇಶ್ ಮತ್ತಿತರೆಲ್ಲರೂ ಕೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ತಿಳಿಸುತ್ತಾರೆ ರಾಘವೇಂದ್ರ.
ಸದ್ಯಕ್ಕೆ ಅಚ್ಯುತ್ ಕುಮಾರ್ ಮತ್ತು ದರ್ಶನ್ ಒಟ್ಟಿಗೆ ನಟಿಸುತ್ತಿರುವ ಭಾಗದ ಚಿತ್ರೀಕರಣದಲ್ಲಿ ನಿರತರಾಗಿದ್ದು “ಕ್ಲೈಮ್ಯಾಕ್ಸ್ ಅನ್ನು ಮಾರ್ಚ್ ೨೧-೨೬ ರೊಳಗೆ ಬಿಡದಿಯಲ್ಲಿ ಚಿತ್ರೀಕರಣ ಮಾಡಲಿದ್ದೇನೆ” ಎನ್ನುವ ನಿರ್ದೇಶಕ ಏಪ್ರಿಲ್ ೧೦ ರೊಳಗೆ ಉಳಿದೆಲ್ಲಾ ಚಿತ್ರೀಕರಣ ಮುಗಿಸಲಿದ್ದಾರಂತೆ.
ನಿರ್ದೇಶಕರೇ ಈ ಸಿನೆಮಾವನ್ನು ನಿರ್ಮಿಸುತ್ತಿದ್ದು “ಮುಂಬೈನಿಂದ ಬಂದು ದೊಡ್ಡ ಸಿನೆಮಾವನ್ನು ನಿರ್ದೇಶಿಸಬೇಕೆನ್ನುವ ಕನಸು ದರ್ಶನ್ ಅವರಿಂದ ಸಾಕಾರವಾಗುತ್ತಿದೆ. ಹೊಸ ನಿರ್ದೇಶಕರ ಬಳಿ ಸಿನೆಮಾ ಮಾಡಲು ಎಲ್ಲರೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ತಿಳಿಸುತ್ತಾರೆ.
ದರ್ಶನ್ ಅವರ ವಿಶಾಲ ಹೃದಯ
ಚಿತ್ರೀಕರಣದ ಹಿಂದಿನ ದರ್ಶನ್ ಅವರ ಗುಣವನ್ನು ಮನಸಾರೆ ಹೊಗಳುವ ನಿರ್ದೇಶಕ “ಎಷ್ಟೋ ಜನಕ್ಕೆ ತಿಳಿಯದ ದರ್ಶನ್ ಅವರ ಮಾನವೀಯ ಗುಣಗಳನ್ನು ನಾನು ತೆರೆಯ ಹಿಂದೆ ಕಂಡಿದ್ದೇನೆ. ಇಲ್ಲಿಯವರೆಗೂ ನಾವು ಮೂರು ಫೈಟ್ ಗಳನ್ನು ನಿರ್ದೇಶಿಸಿದ್ದೇವೆ. ಈ ಫೈಟ್ ನಲ್ಲಿ ಭಾಗಿಯಾದ ಎಲ್ಲರಿಗೂ, ಬಿದ್ದವರು, ಅವರಿಂದ ಹೊಡೆಸಿಕೊಂಡವರಿಗೆ ಪ್ರತಿ ದಿನವು ನಗದು ಹಣ ಸಿಗುವಂತೆ ಅವರು ನೋಡಿಕೊಳ್ಳುತ್ತಾರೆ. ಒಂದು ಮದುವೆ ದೃಶ್ಯಕ್ಕೆ ಚನ್ನೈನಿಂದ ೫೫ ವರ್ಷಕ್ಕೂ ಮೇಲ್ಪಟ್ಟ ಸುಮಾರು ೨೦ ಜನ ಮಹಿಳೆಯರು ಪುರುಷರು ಬಂದಿದ್ದರು. ಅವರ ಉತ್ಸಾಹ ನೋಡಿ ದರ್ಶನ್ ಅವರೇ ತಮ್ಮ ಕೈಯ್ಯಿಂದ ೫೦ ಸಾವಿರ ಹಣ ನೀಡಿದರು” ಎನ್ನುತ್ತಾರೆ ರಾಘವೇಂದ್ರ.