ತುಮಕೂರು, ಮಾ.13- ವಿಧಿಯಾಟ ಬಲ್ಲವರಾರು..? ಇನ್ನು ಮೂರು ದಿನ ಕಳೆದಿದ್ದರೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದ ಯುವಕನನ್ನು ಯಮ ಬಿಡದೆ ತನ್ನತ್ತ ಕರೆದುಕೊಂಡಿದ್ದಾನೆ. ಇನ್ನೇನು ಮದುವೆಗೆ ಮೂರು ದಿನ ಬಾಕಿ ಇತ್ತು, ಕುಟುಂಬ ಸದಸ್ಯರೆಲ್ಲ ಬಟ್ಟೆ ತೊಳೆಯಲು ಜಿಲ್ಲೆಯ ಎಂಎನ್ ಕೋಟೆ ಕೆರೆಗೆ ತೆರಳಿದ್ದರು. ಅಪ್ಪ-ಅಮ್ಮ ಹಾಗೂ ಮಾವ ಖುಷಿ ಖುಷಿಯಿಂದಲೇ ಬಟ್ಟೆ ತೊಳೆಯುತ್ತಿದ್ದರು. ಅದೇನು ಹೆಚ್ಚು-ಕಡಿಮೆ ಆಯಿತೋ ಗೊತ್ತಿಲ್ಲ. ಮಗ ನಿರಂಜನ್ ಕಾಲು ಜಾರಿ ನೀರಿನೊಳಗೆ ಬಿದ್ದುಬಿಟ್ಟ. ಇತ್ತ ಅಪ್ಪನಿಗೂ ಈಜು ಬರುವುದಿಲ್ಲ, ಮಾವನಿಗೂ ಈಜು ಬರುವುದಿಲ್ಲ. ನನ್ನ ಮಗನನ್ನು ರಕ್ಷಿಸಿ ಎಂದು ಅಪ್ಪ ಅಂಗಲಾಚಿದರು. ಅಷ್ಟರೊಳಗಾಗಿ ನಿರಂಜನ್ ನೀರಿನಲ್ಲಿ ಮುಳುಗಿ ಹೋಗಿದ್ದ.
ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಕೆರೆಗೆ ಹಾರಿ ನಿರಂಜನ್ನನ್ನು ಉಳಿಸಲು ಹರಸಾಹಸ ಪಟ್ಟರೂ ರಕ್ಷಿಸಲಾಗಲಿಲ್ಲ. ಶವವೂ ನೀರಿನಲ್ಲಿ ಕಳೆದು ಹೋಗಿತ್ತು.ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಚೇಳೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸಿ ರಾತ್ರಿ ಶವವನ್ನು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಎಂಎನ್ ಕೋಟೆ ಸಮೀಪದ ಮಣಿಪುರ ಗ್ರಾಮದ ನಿವಾಸಿ ನಿರಂಜನ್ಗೂ, ಪಕ್ಕದ ಕಾಳೇನಹಳ್ಳಿ ಗ್ರಾಮದ ಯುವತಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಇನ್ನು ಮೂರು ದಿನ ಬಾಕಿ ಉಳಿದಿತ್ತು. ಅಷ್ಟರೊಳಗೆ ಈ ದುರ್ಘಟನೆ ಸಂಭವಿಸಿ ಸಂಭ್ರಮದಿಂದಿರಬೇಕಾದ ಮದುವೆ ಮನೆ ದುಃಖದ ಮಡುವಿನಲ್ಲಿ ಮುಳುಗಿದೆ.
ಈ ಸಂಬಂಧ ಚೇಳೂರು ಠೃಆಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.