ಬೆಂಗಳೂರು: ಕೊನೆಗೂ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಜಗಳ ಹಿರಿಯ ನಟ ಅಂಬರೀಶ್ ಅವರ ಮಧ್ಯಸ್ಥಿಕೆಯಿಂದ ಸುಖಾಂತ್ಯ ಕಾಣುವ ಲಕ್ಷಣ ಕಾಣಿಸಿದೆ.
ಬೆಂಗಳೂರಿನ ಜೆಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಂಬರೀಶ್, ದರ್ಶನ್ ಮತ್ತು ವಿಜಯಲಕ್ಷ್ಮಿಗೆ ಬುದ್ಧಿವಾದ ಹೇಳಿದ್ದೇನೆ. ಅವರ ಇಷ್ಟಕಷ್ಟಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಅದರ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಮುಂದಿನದ್ದನ್ನು ಯೋಚನೆ ಮಾಡ್ಬೇಕು. ಆಗಿದ್ದು ಆಗಿಹೋಯ್ತು, ಪಾಸ್ಟ್ ಇಸ್ ಪಾಸ್ಟ್ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಸಂದೇಶ್ ನಾಗರಾಜ್, ದರ್ಶನ್ ನನ್ನ ಮಾತಿಗೆ ಬೆಲೆ ಕೊಟ್ಟು ನೀವು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ್ದಾನೆ. ನನ್ನ ಮತ್ತು ವಿಜಯಲಕ್ಷ್ಮಿ ನಡುವೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾನೆ ಎಂದು ಅವರು ತಿಳಿಸಿದರು. ಇಬ್ಬರ ತಪ್ಪುಗಳು ಅವರಿಗೆ ಅರ್ಥವಾಗಿದ್ದು ಎಲ್ಲವೂ ಸುಖಾಂತ್ಯ ಕಾಣುತ್ತದೆ. ಇಬ್ಬರಿಂದಲೂ ಮಾಹಿತಿ ಪಡೆದಿರುವೆ, ಎಲ್ಲವೂ ಸರಿಯಾಗಲಿದೆ. ದಂಪತಿ ಚೆನ್ನಾಗಿರಲಿ ಎನ್ನುವುದೇ ನಮ್ಮ ಹಾರೈಕೆ ಎಂದರು.