ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದ್ದು, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಹಂತಕರು ದೇಹದ ಅರ್ಧಭಾಗವನ್ನು ಕತ್ತರಿಸಿ ಬ್ಯಾಗ್ನಲ್ಲಿ ತುಂಬಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸಮೀಪ ವಿರುವ ಖಾಲಿ ನಿವೇಶನದಲ್ಲಿ ಬಿಸಾಡಿ ಹೋಗಿದ್ದಾರೆ.
ಪರಪ್ಪನ ಅಗ್ರಹಾರದ ಹೊಸ ರಸ್ತೆಯ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿರುವ ಕೃಷ್ಣಾರೆಡ್ಡಿ ಎಂಬುವರ ಖಾಲಿ ನಿವೇಶನದಲ್ಲಿ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಅನುಮಾಸ್ಪದವಾಗಿ ಏರ್ಬ್ಯಾಗ್ ಪತ್ತೆಯಾಗಿತ್ತು. ಹೀಗಾಗಿ ಇದರ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂಟೆ ಬಿಚ್ಚಿದಾಗ ಪುರುಷನೊಬ್ಬನ ಸೊಂಟದ ಕೆಳಗಿನ ಭಾಗ ಪತ್ತೆಯಾಗಿದೆ. ಕೊಲೆಯಾಗಿರುವ ವ್ಯಕ್ತಿಯ ವಯಸ್ಸು ಅಂದಾಜು 25-30 ವರ್ಷಗಳಿರಬಹುದು. ಮುಖ ಸೇರಿ ಸೊಂಟದ ಮೇಲ್ಭಾಗ ಇಲ್ಲದ ಕಾರಣ, ಮೃತನ ಗುರುತು ಪತ್ತೆ ಸಾಧ್ಯವಾಗಿಲ್ಲ. ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹೊಸ ರಸ್ತೆ ಜಂಕ್ಷನ್ನಲ್ಲಿರುವ ಸಿಸಿ ಕ್ಯಾಮರಾ ದೃಶ್ಯದ ತುಣುಕುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಸಿಸಿಟಿಯಲ್ಲಿ ಸೆರೆಯಾಗಿರುವ ವಿಡಿಯೋ ದೃಶ್ಯಾವಳಿಗಳು ದುಷ್ಕರ್ಮಿಗಳ ಸುಳಿವು ಪತ್ತೆಗೆ ಸಹಕಾರಿಯಾಗಬಹುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿದ ಬಳಿಕ ಮೃತನ ಶರೀರವನ್ನು ತುಂಡರಿಸಿ, ಮೂಟೆ ಕಟ್ಟಿದ್ದಾರೆ. ದೇಹದ ಇನ್ನುಳಿದ ಅರ್ಧ ಭಾಗಕ್ಕಾಗಿ ಹುಡುಕಾಟ ನಡೆದಿದೆ. ಒಂದು ವಾರದಿಂದ ಆಗ್ನೇಯ ವಿಭಾಗದ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.