ಪಿರಿಯಾಪಟ್ಟಣ, ಮಾ.10-ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಐಲಾಪುರ ಗ್ರಾಮದಲ್ಲಿ ನಡೆದಿದೆ. ಐಲಾಪುರ ಗ್ರಾಮದ ಲಕ್ಕೇಗೌಡ ಹಾಗೂ ನಿಂಗಮ್ಮ ದಂಪತಿಗಳ ಪುತ್ರ ಎನ್.ಎಲ್.ಸತೀಶ(38) ಆತ್ಮಹತ್ಯೆಗೆ ಶರಣಾದ ರೈತ. ತಾನು ಬೆಳೆದ ಬೆಳೆಗೆ ನಿಗದಿತ ಬೆಲೆ ಸಿಗದೆ ಸಾಲ ಹೆಚ್ಚಾಗಿ ತೀರಿಸಲಾಗದೆ ನೊಂದಿದ್ದ ಸತೀಶ್ ತೋಟದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಹಾಗೂ ಕಾಫಿ ಬೆಳೆ ನಿರ್ವಹಣೆಗಾಗಿ ವಿಎಸ್ಎಸ್ಎನ್ ಬ್ಯಾಂಕ್ನಿಂದ 3.50 ಲಕ್ಷ ಹಾಗೂ ವಿವಿಧೆಡೆ ಲಕ್ಷಾಂತರ ರೂ. ಕೈ ಸಾಲ ಪಡೆದಿದ್ದು, ಬೆಳೆ ಕೈಕೊಟ್ಟಿದ್ದಲ್ಲದೆ, ಬಂದ ಬೆಳೆಗೂ ಸೂಕ್ತ ಬೆಲೆ ಸಿಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕು ಕರವೇ ಅಧ್ಯಕ್ಷ ಎನ್.ಎಲ್.ಗಿರೀಶ್ ಅವರ ಸಹೋದರರಾಗಿದ್ದು, ಪತ್ನಿ ಲೀಲಾವತಿ, ಮಕ್ಕಳಾದ ಶೃತಿ(15), ನಿತಿನ್(9)ರವರನ್ನು ಅಗಲಿದ್ದಾರೆ. ಸುದ್ದಿ ತಿಳಿದ ಶಾಸಕ ಕೆ.ವೆಂಕಟೇಶ್ರವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು. ಪೋಲಿಸ್ ಉಪನಿರೀಕ್ಷಕ ಚಿಕ್ಕಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತಾಪ: ಶಾಸಕ ಕೆ.ವೆಂಕಟೇಶ್, ಮಾಜಿ ಶಾಸಕ ಹೆಚ್.ಸಿ.ಬಸವರಾಜ್, ಮೈಸೂರು ಮಹಾನಗರಪಾಲಿಕೆ ಸದಸ್ಯ ಪಿ.ಪ್ರಶಾಂತ್ಗೌಡ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್, ತಾ.ಜೆಡಿಎಸ್ ಅಧ್ಯಕ್ಷ ಕೆ.ಮಹದೇವ್, ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ಚಂದ್ರು, ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಟಿ.ಚಂದ್ರೇಗೌಡ, ತಾಲ್ಲೂಕು ಪ್ರಬಾರ ದಂಡಾಧಿಕಾರಿ ರಂಗರಾಜು, ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗ ಮರಿಗೌಡ ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.