ಬೆಂಗಳೂರು: ದೇಗುಲ ಜಾತ್ರೆ ವೇಳೆ ಅಗ್ನಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ತುಮಕೂರಿನ ಎತ್ತೇನಹಳ್ಳಿಯಲ್ಲಿ ಶಿವರಾತ್ರಿ ಪ್ರಯುಕ್ತ ಜಾತ್ರೆ ನಡೆಯುತ್ತಿತ್ತು. ಜಾತ್ರೆಗೆ ಸುತ್ತಮುತ್ತಲಿಂದ 7 ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಂಪ್ರದಾಯದ ಅಗ್ನಿ ಕೊಂಡ ಹಾಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಂತೆ ಕೊಂಡ ಹಾಯುವ ಹಲವು ಮಕ್ಕಳಲ್ಲಿ ಕಂಬತ್ನಳ್ಳಿ ಗ್ರಾಮದ ಹುಡುಗನೊಬ್ಬ ಆಯತಪ್ಪಿ ಜಾರಿ ಬಿದ್ದಿದ್ದಾನೆ. ಈ ವೇಳೆ ಆತನನ್ನು ರಕ್ಷಿಸಲು ಜನರು ಮುಂದಾದಾಗ ಒಬ್ಬರ ಮೇಲೊಬ್ಬರಂತೆ ಕೊಂಡಕ್ಕೆ ಜನ ಬಿದ್ದಿದ್ದಾರೆ.
ಘಟನೆ ವೇಳೆ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.