ಗದಗ: ಸರ್ಕಾರಿ ವೈದ್ಯರ ನಿರ್ಲಕ್ಷ್ಯ ಮುಂದುವರೆದಿದ್ದು, ಗರ್ಭದಲ್ಲಿ ಮಗು ಸತ್ತು 22 ಗಂಟೆಯಾದರೂ ಗರ್ಭಿಣಿಗೆ ಚಿಕಿತ್ಸೆ ನೀಡದಿರುವ ಘಟನೆ ಗದಗದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ನೋವಿನಿಂದ ಬಳಲುತ್ತಿದ್ದ ಮಂಜುಳಾ ಮುದಿಗೌಡರ್ ಅವರು ನಿನ್ನೆ ಬೆಳಿಗ್ಗೆ ಗದಗದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಕೆಯನ್ನು ಪರೀಕ್ಷೆ ನಡೆಸಿರುವ ವೈದ್ಯರು ಗರ್ಭದಲ್ಲಿ ಮಗು ಸತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಮಗು ಸತ್ತು 22 ಗಂಟೆಗಳಾದರೂ ಯಾವುದೇ ಚಿಕಿತ್ಸೆಯನ್ನು ನೀಡಿಲ್ಲ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಗರ್ಭಿಣಿ ಈ ವರೆಗೂ ನೋವನ್ನು ಅನುಭವಿಸಿತ್ತಿದ್ದು, ಆಕೆಯ ನೋವಿಗೆ ಅಲ್ಲಿನ ವೈದ್ಯರು ಯಾವುದೇ ರೀತಿಯ ಚಿಕಿತ್ಸೆಯನ್ನು ನೀಡಿಲ್ಲ. ಮಹಿಳೆಗೆ ನಿನ್ನೆ ಪಾತ್ರಿ ಪಾಳಿಯಲ್ಲಿದ್ದ ಸ್ತ್ರೀ ತಜ್ಞೆ ಶ್ರುತಿ ಪಾಟೀಲ್ ಅವರು ಚಿಕಿತ್ಸೆ ನೀಡಬೇಕಿತ್ತು. ಆದರೆ, ವೈದ್ಯ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ವೈದ್ಯರೇ ಬಂದಿಲ್ಲ ಎಂದ ಮೇಲೆ ನಾವು ಹೇಗೆ ತಾನೇ ಚಿಕಿತ್ಸೆ ಕೊಡಲು ಸಾಧ್ಯವೆಂದು ಅಲ್ಲಿನ ನರ್ಸ್ ಗಳು ಮಹಿಳೆಯ ಸಂಬಂಧಿಕರ ಬಳಿ ತಮ್ಮ ಅಸಾಹಯಕತೆನ್ನು ವ್ಯಕ್ತಪಡಿಸಿದ್ದಾರೆ.