ಬಾಲಿವುಡ್ಗೂ ಕರ್ನಾಟಕಕ್ಕೂ ಅದೇನೋ ಹೆಸರಿಸಲಾಗದ ನಂಟು. ಬಾಲಿವುಡ್ನ ಖ್ಯಾತನಾಮರಲ್ಲಿ ಅನೇಕರು ಕರ್ನಾಟಕ ಮೂಲದವರು. ಕನ್ನಡಿಗರಾದರೂ ಮುಂಬೈನಲ್ಲೇ ಹುಟ್ಟಿ ಬೆಳೆದು ಬಾಲಿವುಡ್ನಲ್ಲಿ ಹೆಸರು ಗಳಿಸುವ ಮೂಲಕ ಕನ್ನಡದ ಪತಾಕೆ ಹಾರಿಸಿದವರು. ‘ಐಶ್ವರ್ಯ ರೈ’, ‘ಸುನೀಲ್ ಶೆಟ್ಟಿ’, ‘ಜೆನಿಲಿಯಾ’ ಸೇರಿದಂತೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಕೂಡ ಮಂಗಳೂರು ಮೂಲದವರು ಎಂಬ ಸುದ್ದಿಯೊಂದು ಕೆಲ ತಿಂಗಳ ಹಿಂದೆ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು .
ರಜನಿಕಾಂತ್
ಬೆಂಗಳೂರು ಮೂಲದ ಶಿವಾಜಿರಾವ್ ಗಾಯಕವಾಡ ಬಿಟಿಎಸ್ನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಟಿಸುತ್ತಿದ್ದರು. ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ನಟನೆ ಕ್ಷೇತ್ರದಲ್ಲಿ ಡಿಪ್ಲೋಮಾ ಪಡೆದು ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಎಂದು ಹೆಸರಾದರು. ಅಲ್ಲಿಯ ಅಭಿಮಾನಿಗಳ ಆರಾಧ್ಯ ದೈವವಾದರು. ತೆಲುಗು, ಕನ್ನಡ, ಹಿಂದಿ ಚಿತ್ರದಲ್ಲೂ ಕೂಡ ನಟಿಸಿ ದಕ್ಷಿಣದ ಖ್ಯಾತ ನಟ ಎನ್ನಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ
ಖ್ಯಾತ ಚೆಸ್ ಆಟಗಾರ ಪ್ರಕಾಶ್ ಪಡುಕೋಣೆ ಮಗಳಾದ ದೀಪಿಕಾ ಮೊದಲ ಬಾರಿಗೆ ಕನ್ನಡ ಐಶ್ವರ್ಯ ಚಿತ್ರದಲ್ಲಿ ನಟಿಸಿದರು ಕೂಡ, ಖ್ಯಾತಿ ಗಳಿಸಿದ್ದು ಬಾಲಿವುಡ್ನಲ್ಲಿ. ಶಾರುಖ್ ಜತೆ ‘ಓಂ ಶಾಂತಿ ಓಂ’ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ಗೆ ಕಾಲಿರಿಸಿದ ದೀಪಿಕಾ ಇಂದು ಹಿಂದಿ ಚಿತ್ರರಂಗದ ಬೇಡಿಕೆ ನಟಿಯಾಗಿದ್ದಾರೆ.
ಐಶ್ವರ್ಯ ರೈ
ಮಂಗಳೂರು ಮೂಲದ ಬಂಟರ ಹುಡುಗಿ ಐಶ್ವರ್ಯಾ ರೈ ಮೊದಲು ಮಿಂಚಿದ್ದು ಮಾಡೆಲಿಂಗ್ ಕ್ಷೇತ್ರದಲ್ಲಿ. 1994ರಲ್ಲಿ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಈ ನೀಲಿಕಣ್ಣಿನ ಚೆಲುವೆ ಬಾಲಿವುಡ್ ಅಂಗಳಕ್ಕೆ ಅನೇಕ ಹಿಟ್ ಚಿತ್ರಗಳನ್ನು ನೀಡಿದವರು. ತಮಿಳಿನ ‘ಇರುವರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಐಶ್ವರ್ಯಾ ಹಿಂದಿ, ತಮಿಳ್, ಬೆಂಗಾಲಿ ಮತ್ತು ಇಂಗ್ಲೀಷ್ ಚಿತ್ರದಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ನಟ ಅಭಿಷೇಕ್ ಬಚ್ಚನ್ ಅವರನ್ನೂ ಮದುವೆಯಾಗುವ ಮೂಲಕ ಬಾಲಿವುಡ್ ‘ಬಿಗ್ ಬಿ’ ಮನೆಯಂಗಳ ಪ್ರವೇಶಿಸಿರುವ ಐಶ್ ಈಗ ಒಂದು ಮಗುವಿನ ತಾಯಿಯಾಗಿ ಸುಂದರ ದಾಂಪತ್ಯ ನಡೆಸುತ್ತಿದ್ದಾರೆ.
ಶಾರುಕ್ ಖಾನ್
ಬಾಲಿವುಡ್ ಖಾನ್ ತ್ರೇಯರಲ್ಲಿ ಒಬ್ಬರಾದ ಶಾರುಖ್ ಕೂಡ ಕರ್ನಾಟಕದ ಮಂಗಳೂರು ಮೂಲದವರು. ತಮ್ಮ 5ನೇ ವಯಸ್ಸಿನವರೆಗೆ ಶಾರುಖ್ ಮಂಗಳೂರಿನಲ್ಲಿದ್ದರು ಎಂಬ ಸುದ್ದಿಯೊಂದು ಇತ್ತೀಚೆಗೆ ಬಿತ್ತರವಾಗಿತ್ತು. ಇವರ ತಾಯಿ ಆಂಧ್ರ ಮೂಲದ ಕರ್ನಾಟಕ ವಾಸಿ. ಶಾರುಖ್ ಖಾನ್ ತಾತ ಮಂಗಳೂರು ಕೋಟೆ ನಿರ್ಮಾಣದ ಇಂಜಿನಿಯರ್ಗಳಲ್ಲಿ ಒಬ್ಬರಾಗಿದ್ದರು.
ಸುನೀಲ್ ಶೆಟ್ಟಿ
ನಟ, ನಿರ್ಮಾಪಕ ಸುನೀಲ್ ಶೆಟ್ಟಿ ಮಂಗಳೂರು ಮೂಲದವರು. ಸುಮಾರು 110ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚಿದವರು. ಇವರು ಬಾಲಿವುಡ್ಗೆ ತಮ್ಮನ್ನು ಸೀಮಿತವಾಗಿರಿಸಿಕೊಳ್ಳದೇ ‘ಡೊಂಟ್ ಸ್ಟಾಪ್ ಡ್ರೀಮಿಂಗ್’ ಎಂಬ ಹಾಲಿವುಡ್ ಸಿನಿಮಾದಲ್ಲೂ ನಟಿಸಿದರು.
ಜೆನಿಲಿಯಾ ಡಿ’ಸೋಜಾ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಮುದ್ದಾದ ಮಾತು, ತುಂಟ ನೋಟದ ಜೆನಿಲಿಯಾ ಕರ್ನಾಟಕದ ಮನೆಮಗಳು. ತೆಲುಗಿನ ‘ಬೊಮ್ಮರಿಲು’, ತಮಿಳಿನ ‘ಸಂತೋಷ್ಂ ಸುಬ್ರಹ್ಮಣ್ಯಂ’ ಸೇರಿದಂತೆ ‘ಸತ್ಯ ಇನ್ ಲವ್’ ಎಂಬ ಕನ್ನಡ ಚಿತ್ರದಲ್ಲೂ ನಟಿಸುವ ಮೂಲಕ ಬಹುಭಾಷಾ ತಾರೆ ಎನ್ನಿಸಿಕೊಂಡಿದ್ದಾರೆ. ಮಂಗಳೂರು ಕ್ಯಾಥೋಲಿಕ್ ಕ್ರಿಶ್ಚಿಯನ್ ವಂಶಕ್ಕೆ ಸೇರಿದ ಈಕೆ ನಟ ರಿತೇಶ್ ದೇಶ್ಮುಖ್ ಅವರನ್ನು ಮದುವೆಯಾಗಿ ರಿಯಾನ್ ಎಂಬ ಮುದ್ದಾದ ಮಗುವಿನ ತಾಯಿಯಾಗಿದ್ದಾರೆ.
ಪ್ರಕಾಶ್ ರೈ
ದಕ್ಷಿಣ ಭಾರತದ ಈ ಖ್ಯಾತ ನಟ ಕರ್ನಾಟಕದ ಕುವರ. ನಟನಾ ಕ್ಷೇತ್ರಕ್ಕೆ ಕಾಲಿರಿಸುವ ಆರಂಭದಲ್ಲಿ ₹300ಕ್ಕೆ ಹಿನ್ನೆಲೆ ಕಲಾವಿದನಾಗಿ ಬೆಂಗಳೂರಿನ ಕಲಾಕ್ಷೇತ್ರಕ್ಕೆ ಸೇರಿದವರು. ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಚಿತ್ರದಲ್ಲಿ ನಟಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ
ತನ್ನ ತೆಳ್ಳನೆಯ ದೇಹಸಿರಿಯ ಮೂಲಕ ಸಿನಿಪ್ರಿಯರ ಮನಗೆದ್ದ ಚೆಲುವೆ ಶಿಲ್ಪಾ ಶೆಟ್ಟಿ ಮಂಗಳೂರಿನ ಬಂಟರ ಬೆಡಗಿ. ಮಾಡೆಲಿಂಗ್ ಕ್ಷೇತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ ಈಕೆ 1994ರಲ್ಲಿ ಬಾಕ್ಸ್ಆಫೀಸ್ ಕೊಳ್ಳೆ ಹೊಡೆದ ‘ಆಗ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು. ಕನ್ನಡದ ಖ್ಯಾತ ನಟರೊಂದಿಗೆ ನಟಿಸುವ ಮೂಲಕ ಚಂದನವನದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. 2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವರಿಸುವ ಮೂಲಕ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ ಶಿಲ್ಪಾ ಸದ್ಯಕ್ಕೆ ನಟನೆಗೆ ವಿರಾಮ ಹೇಳಿದ್ದಾರೆ.
ಅನುಷ್ಕಾ ಶರ್ಮಾ
ಬೆಂಗಳೂರಿನಲ್ಲಿ ಜನಿಸಿದ ಅನುಷ್ಕಾ ಶರ್ಮಾ ತಮ್ಮ ಶಿಕ್ಷಣದ ಬಹುತೇಕ ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆದರು. ಉತ್ತರಾಖಂಡ್ ಮೂಲದವರು. ನಟನೆ ಕ್ಷೇತ್ರಕ್ಕೆ ಕಾಲಿರಿಸುವ ಮೊದಲು ಮಾಡೆಲಿಂಗ್ ಹಾಗೂ ಜಾಹೀರಾತು ಜಗತ್ತಿನಲ್ಲಿ ಮಿಂಚಿದವರು. ಮೊದಲ ಬಾರಿಗೆ ಆದಿತ್ಯ ಚೋಪ್ರಾ ನಿರ್ದೇಶನದ ‘ರಬ್ ನೆ ಬನಾದಿ ಜೋಡಿ’ ಚಿತ್ರದ ಮೂಲಕ ಹಿಂದಿ ಚಿತ್ರರಂಗದಲ್ಲಿ ಹೆಜ್ಜೆಯೂರಿದರು.
ರೇಷ್ಮಾ