ಬೆಂಗಳೂರು: ಇಬ್ಬರು ವಿದ್ಯಾರ್ಥಿಗಳು ಹಾಗೂ ಬಿಎಂಟಿಸಿ ಬಸ್ ನಿರ್ವಾಹಕರ ನಡುವೆ ಜಟಾಪಟಿ ನಡೆದಿದ್ದು, ಬಿಎಂಟಿಸಿ ಬಸ್ ನ ನಿರ್ವಾಹಕ ವಿದ್ಯಾರ್ಥಿನಿಯನ್ನು 45 ನಿಮಿಷ ಕೂಡಿಹಾಕಿದ್ದ ಆರೋಪ ಕೇಳಿಬಂದಿದೆ.
ಫರೀದಾಬಾದ್ ಮೂಲದ ರಿಯಾ ಅಹುಜಾ ಆರೋಪ ಮಾಡಿರುವ ವಿದ್ಯಾರ್ಥಿನಿಯಾಗಿದ್ದಾಳೆ. ಯುವತಿ ಯಲಹಂಕ ಬಳಿ ನಡೆದ ಘಟನೆಯ ವಿವರಗಳನ್ನು ಫೇಸ್ಬುಕ್ ನಲ್ಲಿ ಬರೆದಿರುವುದನ್ನು ಆಧರಿಸಿ ಬಿಎಂಟಿಸಿ ಬಸ್ ಕಂಡಕ್ಟರ್ ಉಮಾಶಂಕರ್ ನನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದಾರೆ.
“ಬಿಎಂಟಿಸಿ ಬಸ್ ನಲ್ಲಿ ಸ್ನೇಹಿತ ಓಜಸ್ವಿ ಸಿಂಗ್ ಜತೆ ಮನೆಗೆ ಹೋಗುತ್ತಿದ್ದಾಗ ನಮ್ಮ ಬಳಿ ಬಂದ ಕಂಡಕ್ಟರ್, ಮಹಿಳೆಯರ ಸೀಟಿನ ಹತ್ತಿರ ನಿಂತಿರುವುದನ್ನು ಆಕ್ಷೇಪಿಸಿ ಹೋಗುವಂತೆ ನನ್ನ ಸ್ನೇಹಿತನನ್ನು ಗದರಿದ ಇದಕ್ಕೆ ಓಜಸ್ವಿ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯಿತು, ವಾಗ್ವಾದ ಮಿತಿಮೀರಿದ ಪರಿಣಾಮ ಕಂಡಕ್ಟರ್ ನನ್ನ ಗೆಳೆಯನನ್ನು ದೂಡಿದ. ಕೋಪಗೊಂಡ ಆತನೂ ಕಂಡಕ್ಟರ್ನನ್ನು ಜೋರಾಗಿ ತಳ್ಳಿದ. ನಿರ್ವಾಹಕನನ್ನು ತಳ್ಳಿದ್ದಕ್ಕಾಗಿ ಪ್ರಯಾಣಿಕರು ಓಜಸ್ವಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಭಯಗೊಂಡ ನನ್ನ ಸ್ನೇಹಿತ ಬಸ್ ನಿಂದ ಪರಾರಿಯಾದ. ಯುವಕನ ವಿರುದ್ಧ ದೂರು ನೀಡಲು ಬಸ್ ನ್ನು ಯಲಹಂಕ ಠಾಣೆ ಸಮೀಪ ನಿಲ್ಲಿಸಲಾಯಿತು. ಆದರೆ ನನ್ನನ್ನು ಮಾತ್ರ ಇಳಿಯಲು ಬಿಡದೆ ಬಾಗಿಲು ಬಂದ್ ಕೂಡಿಟ್ಟರು” ಎಂದು ಯುವತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಳು.
ನಿರ್ವಾಹಕರ ವಿರುದ್ಧ ದೂರು ನೀಡಿರುವ ಯುವತಿ ಬಸ್ನಲ್ಲಿ ಕೂಡಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.