ಧಾರವಾಡ: ಅವರಿಬ್ಬರೂ ಅಣ್ಣ ತಮ್ಮಂದಿರು. ಅವರಿಬ್ಬರದ್ದೂ ಸುಖಿ ಸಂಸಾರ. ಆದರೆ ಅದೆನಾಯಿತೆನೋ ತಮ್ಮ ಬರ್ಬರವಾಗಿ ಹತ್ಯೆಯಾಗುತ್ತಾನೆ. ಇದಾದ 24 ಗಂಟೆಗಳೊಗಾಗಿ ಅಣ್ಣನೂ ಕೂಡಾ ನೇಣಿಗೆ ಶರಣಾಗುತ್ತಾನೆ. ಕೌಟುಂಬಿಕವಾಗಿ ನಡೆದ ಈ ಎರಡು ಸಾವು ನಿಗೂಢವಾಗಿ ಉಳಿದಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ತಮ್ಮ ಸತ್ತ 24 ಗಂಟೆಯಲ್ಲೇ ಅಣ್ಣ ಕೂಡಾ ನೇಣಿಗೆ ಶರಣಾದ ಘಟನೆಯ ಕಥೆ ಇದು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬೀರಪ್ಪ ಹಾಗೂ ಹನುಮಂತ ಎನ್ನುವ ಅಣ್ಣ ತಮ್ಮ 24 ಗಂಟೆಯೊಳಗೆ ಸಾವನ್ನಪ್ಪಿದ್ದಾರೆ. ತಮ್ಮ ಬೀರಪ್ಪ ದೊಡ್ಡಮ್ಮನವರ ಮೊನ್ನೆ ರಾತ್ರಿ ಕೊಲೆಯಾಗಿ ಸಾವನ್ನಪ್ಪಿದ್ದರೆ, ಇತ್ತ ಅಣ್ಣ ಹನುಮಂತ ತಮ್ಮನ ಅಂತ್ಯಕ್ರಿಯೆ ಮುಗಿಸಿ ಬಂದು ನೇಣಿಗೆ ಶರಣಾಗಿದ್ದಾನೆ.
ಅಣ್ಣ ತಮ್ಮನ ನಿಗೂಢ ಸಾವು ಗ್ರಾಮಸ್ಥರಲ್ಲಿ ಹಲವು ಸಂಶಯಗಳು ಮೂಡುವಂತೆ ಮಾಡಿದೆ. ಕೊಲೆಯಾದ ಬೀರಪ್ಪನಿಗೆ ಮೂರು ಮಕ್ಕಳಿದ್ದರೆ, ನೇಣಿಗೆ ಶರಣಾದ ಹನುಮಂತನಿಗೂ 3 ಮಕ್ಕಳು. ಅಣ್ಣ ತಮ್ಮ ಬೇರೆ ಬೇರೆ ಮನೆಗಳಲ್ಲಿದ್ದರೂ ಆದರೆ ಇಬ್ಬರ ನಡುವೆ ಯಾವುದೇ ವೈಮನಸ್ಸು ಕೂಡಾ ಇರಲಿಲ್ಲ. ಇನ್ನು ತಾಯಿ ನೀಲವ್ವರಿಗೆ ಮಕ್ಕಳ ಸಾವಿನ ಬಗ್ಗೆ ಕೇಳಿದರೆ ಇಬ್ಬರೂ ಏನೂ ಹೇಳಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಅಣ್ಣ ಹನುಮಂತ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ. ತಾನಾಯ್ತು ತನ್ನ ಕೆಲಸವಾಯ್ತು ಎಂಬಂತೆ ಜೀವನ ಸಾಗಿಸುತ್ತಿದ್ದರು. ಆದರೆ ಈ ಕುಟುಂಬದಲ್ಲಿ ಸಂಭವಿಸಿರುವ ಹಠಾತ್ ಸಾವಿನಿಂದ ಕುಟುಂಬಸ್ಥರಿಗೆ ಸಿಡಿಲು ಬಡಿದಂತಾಗಿದೆ. ಇತ್ತ ಸಾವಿನ ರಹಸ್ಯ ಕೂಡಾ ಈ ಸಹೋದರರಿಗೆ ಮಾತ್ರ ಗೊತ್ತಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯವಾಗಿದೆ.
ಸದ್ಯ ಈ ನಿಗೂಢ ಸಾವಿನ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.