ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸಿರುವ 2016-17ನೇ ಸಾಲಿನ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡದಿರುವುದು ಭಾರಿ ನಿರಾಶೆ ಮೂಡಿಸಿದೆ.
ಯಾವುದೇ ಹೊಸ ಮಾರ್ಗಗಳನ್ನು ಘೋಷಣೆ ಮಾಡದ ಸಚಿವರು, ಹಳೆಯ ಯೋಜನೆಗಳ ಮುಕ್ತಾಯಕ್ಕೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಿದ್ದಾರೆ. ಹಿಂದೆ ರೈಲ್ವೆ ಸಚಿವರಾಗಿದ್ದ ಕನ್ನಡಿಗರಾದ ಡಿ.ವಿ.ಸದಾನಂದ ಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯಕ್ಕೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅವುಗಳಿಗೆ ಸುರೇಶ್ ಪ್ರಭು ಅವರು ಸೂಕ್ತ ಅನುದಾನ ನೀಡಲಿದ್ದಾರೆ ಎಂಬ ಭರವಸೆ ಇತ್ತು. ಆದರೆ ಆ ಭರವಸೆ ಕೂಡ ಹುಸಿಯಾಗಿದೆ .
ಬೆಂಗಳೂರಿಗೆ ಹೊಸ ಸಬ್ ಅರ್ಬನ್ ರೈಲು ಯೋಜನೆ ಬಿಟ್ಟರೆ ಮತ್ತೆ ಯಾವುದೇ ಅನುಕೂಲ ಸಿಕ್ಕಿಲ್ಲ. ಬಾಗಲಕೋಟೆ-ಕುಡಚಿ ನೂತನ ಮಾರ್ಗ, ಬೀದರ್-ಕಲಬುರಗಿ, ಕಲಬುರಗಿ-ಗಬ್ಬೂರು ತನಕ ಸರ್ವೇ ಕಾರ್ಯ ನಡೆಯುವ ನಿರೀಕ್ಷೆ ಇತ್ತು. ಆದರೆ, ಸಚಿವರು ಹೊಸ ಮಾರ್ಗ ಘೋಷಣೆ ಬದಲು ಹಿಂದಿನ ಯೋಜನೆಗಳನ್ನು ಮುಕ್ತಾಯಗೊಳಿಸಲು ಗಮನಹರಿಸಿದ್ದಾರೆ.
ಹೊಸಪೇಟೆ-ಬೆಂಗಳೂರು ಇಂಟರ್ ಸಿಟಿ ರೈಲು, ಬಿಜಾಪುರ-ಬಳ್ಳಾರಿ ಇಂಟರ್ ಸಿಟಿ ರೈಲು ಘೋಷಣೆಯಾಗುವ ನಿರೀಕ್ಷೆ ಇತ್ತು. ಸಕಲೇಶಪುರ-ಮೂಡಿಗೆರೆ-ಶೃಂಗೇರಿ ಮಾರ್ಗ ಯೋಜನೆ, ಶಿವಮೊಗ್ಗ-ಹೊನ್ನಾವರ ಮಾರ್ಗ, ಶಿವಮೊಗ್ಗ-ಹರಿಹರ ರೈಲು ಮಾರ್ಗದ ಯೋಜನೆಗಳ ಘೋಷಣೆಯಾಗುವ ನಿರೀಕ್ಷೆ ಇತ್ತು. ಆದರೆ ಕನ್ನಡಿರ ಯಾವುದೇ ನಿರೀಕ್ಷೆಗಳಿಗೆ ಮನ್ನಣೆ ನೀಡದ ಸುರೇಶ್ ಪ್ರಭು ಎಲ್ಲಾ ಆಸೆಗಳಿಗೆ ಎಳ್ಳು ನೀರು ಬಿಟ್ಟಿದ್ದಾರೆ.