ಮೈಸೂರು.ಜ.24-ಉಗ್ರರ ನಿಗ್ರಹಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು. ರಾಜ್ಯದ ಪೋಲಿಸರು ಕೇಂದ್ರದ ಎನ್ ಐಎ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಳಗ್ಗೆ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಗಣರಾಜ್ಯೋತ್ಸವ ದಿನದಂದು ದೆಹಲಿ, ಬೆಂಗಳೂರು, ಮುಂಬೈ, ಪಕ್ಷಿಮಬಂಗಾಳ ಸೇರಿದಂತೆ ಅನೇಕ ಕಡೆ ವಿದ್ವಾಂಸಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ 5 ಮಂದಿ ಉಗ್ರರನ್ನು ಬಂಧಿಸಲಾಗಿದೆ. 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸರು ಕಟ್ಟೆಚ್ಚವಹಿಸಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ರಾಜ್ಯದ ಪೋಲಿಸರು ಬದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ ಕಾಂಗ್ರೇಸ್ ಅಧ್ಯಕ್ಷರ ವಿರುದ್ಧ ಏಕವಚನ ಪದಪ್ರಯೋಗ ಮಾಡಿರುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಭಾಷೆ ಬಳಸುವ ಮುನ್ನ ಯೋಚಿಸುವುದು ಅಗತ್ಯ. ಯಾರೇ ಆಗಲಿ ಟೀಕಿಸುವ ಮೊದಲು ನಾಲಿಗೆಯ ಮೇಲೆ ಬಿಗಿ ಹಿಡಿತವಿರುವುದು ಒಳ್ಳೆಯದು. ಟೀಕೆಗಳು ಸಕಾರಾತ್ಮಕವಾಗಿರಬೇಕು ಎಂದು ಕಿಡಿಕಾರಿದರು.
ನಾಳೆ ಪಟ್ಟಿ ಪ್ರಕಟ
ದೇವದುರ್ಗ, ಬೀದರ್, ಹೆಬ್ಬಾಳ್ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಬಿಡುಗಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.
. ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ವರಿಷ್ಟರ ಒಪ್ಪಿಗೆಯ ನಂತರ ನಾಳೆ ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಇನ್ನು ಕಾಲವಕಾಶ ಇದೆ. ಈ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಗೆ ವರಿಷ್ಠರೊಂದಿಗೆ ಚರ್ಚಿಸಿ ನಂತರ ಬಿಡುಗಡೆಗೊಳಿಸಲಾಗುವುದು ಎಂದರು.
ಕರ್ನಾಟಕ