ಕಲಬುರಗಿ : ತನಗೆ ಜೀವ ಭಯವಿದೆ. ರಕ್ಷಣೆ ಕೊಡಿ ಅಂತ ಮನೆಗೆ ಬಂದ ಸಂಬಂಧಿಕನೊಬ್ಬ ಅದೇ ಮನೆಯ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಆರು ವರ್ಷದ ಮಗುವನ್ನು ಕೊಚ್ಚಿ ಕೊಲೆ ಮಾಡಿರುವ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಮೈನಾಳ ಗ್ರಾಮದಲ್ಲಿಂದು ನಸುಕಿನ ಜಾವ ನಡೆದಿದೆ.
ಭೂತಾಳಿ ಅನ್ನೋ ಆರು ವರ್ಷದ ಬಾಲಕನೇ ಕೊಲೆಯಾದ ದುರ್ದೈವಿ. ಬಾಲಕನ ತಂದೆ ಪ್ರಭು ನಾಯ್ಕೋಡಿ, ತಾಯಿ ಸರಸ್ವತಿ ನಾಯ್ಕೋಡಿ ಮೇಲೆಯೂ ಆ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲಾ ರಾದ್ದಾಂತ ಮಾಡಿರುವ ವ್ಯಕ್ತಿ ಅಫಜಲಪೂರ ತಾಲೂಕಿನ ಕಿರುಸಾವಳಗಿ ಗ್ರಾಮದ ಮೌಲಪ್ಪ. ಈತ ಮಾರಣಾಂತಿಕ ಹಲ್ಲೆಗೊಳಗಾಗಿರುವ ಪ್ರಭು ನಾಯ್ಕೋಡಿಯ ಸಹೋದರಿಯ ಮಗ. ಇದೇ ಕಾರಣಕ್ಕಾಗಿ ನಿನ್ನೆ ಮನೆಗೆ ಬಂದ ಈತನಿಗೆ ಇವರು ರಕ್ಷಣೆ ನೀಡಿದ್ದಾರೆ.
ರಾತ್ರಿಯೆಲ್ಲಾ ಯಾರೋ ಹಲ್ಲೆಗೆ ಬರ್ತಿದಾರೆ ಅಂತೆಲ್ಲಾ ವಿಚಿತ್ರವಾಗಿ ವರ್ತಿಸಿದ್ದಾನೆ. ಆದ್ರೆ ನಸುಕಿನ ಮೂರು ಗಂಟೆಯ ಸುಮಾರಿಗೆ ಈ ದಂಪತಿಗಳ ಮೇಲೆ ಮನೆಯಲ್ಲಿಯೇ ಇದ್ದ ಕಬ್ಬು ಕಟಾವು ಮಾಡುವ ಮಚ್ಚಿನಿಂದ ಹಲ್ಲೆ ನಡೆಸಲಾರಂಭಿಸಿದ್ದಾನೆ. ಇದನ್ನು ಕಂಡು ಪಕ್ಕದಲ್ಲಿ ಮಲಗಿದ್ದ ಮಗು ಅಳುತ್ತಾ ತಂದೆಯ ಬಳಿ ಬಂದಿದೆ. ಆ ಮಗುವಿಗೂ ಅದೇ ಮಚ್ಚಿನಿಂದ ಹೊಡೆದಾಗ ಮಗು ಸಾವಿಗೀಡಾಗಿದೆ. ಕೊಲೆಗಾರ ಮೌಲಾಪ್ಪನ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎನ್ನಲಾಗಿದೆ. ಆತನನ್ನು ಅಫಜಲಪೂರ ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ. ತಮಗಾದ ವಿಪರೀತ ಗಾಯದ ನಡುವೆಯೂ ಹೆತ್ತವರು ಮಗನಿಗಾಗಿ ರೋಧಿಸುತ್ತಿರುವ ದೃಷ್ಯ ಕರುಳು ಕಿತ್ತುಬರುವಂತಿದೆ. ಗಾಯಾಳು ದಂಪತಿಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.