ರಾಯಚೂರು, ಡಿ. 4: ಜಿಲ್ಲೆಯ ಮಾನ್ವಿ ತಾಲೂಕಿನ ಪೊತ್ನಾಳ್ ಗ್ರಾಮದಲ್ಲಿನ ಹಾಸ್ಟೆಲ್ನಲ್ಲಿದ್ದ ಹತ್ತನೆ ತರಗತಿ ವಿದ್ಯಾರ್ಥಿ ವೀರೇಶ್ (16) ಆಕಸ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗ್ರಾಮಸ್ಥರು ಹಾಸ್ಟೆಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಪೀಠೋಪಕರಣ, ವೈದ್ಯಕೀಯ ಸಲಕರಣೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ನಾಲ್ಕೈದು ಸುತ್ತು ಅಶ್ರುವಾಯು ಸಿಡಿಸಿದ್ದು, ರಾಯಚೂರು ಜಿಲ್ಲಾಧಿ ಕಾರಿಯೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಹಾಸ್ಟೆಲ್ ವಾರ್ಡನ್, ಶಾಲೆಯ ಮುಖೋಪಾಧ್ಯಾಯ ಹಾಗೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿದ ಘಟನೆ ತನಿಖೆಗೆ ಆದೇಶಿಸಿದ್ದರಿಂದ ಗ್ರಾಮದಲ್ಲಿ ಪರಿಸ್ಥಿತಿ ತಿಳಿಯಾಗಿದೆ.
ಘಟನೆ ವಿವರ: ಇಲ್ಲಿನ ಪೊತ್ನಾಳ್ ಗ್ರಾಮದಲ್ಲಿನ ಹಾಸ್ಟೆಲ್ನಲ್ಲಿ ವೀರೇಶ್ ಎಂಬ ವಿದ್ಯಾರ್ಥಿ ಹತ್ತನೆ ತರಗತಿ ವ್ಯಾಸಂಗ ಮಾಡು ತ್ತಿದ್ದು, ಹಾಸ್ಟೆಲ್ಗೆ ಹೊಂದಿಕೊಂಡಂತೆ ಶಾಲೆಯೂ ಇದೆ. ಶುಕ್ರವಾರ ಬೆಳಗ್ಗೆ ಶಾಲೆಯ ಶಿಕ್ಷಕರೊಬ್ಬರು ನೀರಿನ ಮೋಟಾರ್ ಸ್ವಿಚ್ ಹಾಕಲು ತಿಳಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ವೀರೇಶ್ ವಿದ್ಯುತ್ ಸ್ವಿಚ್ ಹಾಕುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಅಸ್ವಸ್ಥಗೊಂಡಿ ದ್ದಾನೆ. ಕೂಡಲೇ ಆತನನ್ನು ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಕ್ಷಕರು ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಈ ಸುದ್ದಿ ಕೇಳಿದ ಕೂಡಲೇ ಆಕ್ರೋಶಗೊಂಡ ವಿದ್ಯಾರ್ಥಿ ಗಳು ಹಾಗೂ ಗ್ರಾಮಸ್ಥರು ಹಾಸ್ಟೆಲ್, ಶಾಲೆ, ಆಸ್ಪತ್ರೆ ಹಾಗೂ ಸಿಬ್ಬಂದಿಯ ವಸತಿ ಗೃಹಗಳಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅಲ್ಲದೆ, ಪೀಠೋಪಕರಣಗಳು ಹಾಗೂ ವೈದ್ಯ ಕೀಯ ಪರಿಕರಗಳನ್ನು ಬೀದಿಗೆ ತಂದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ಬಳಿಕ ವಿದ್ಯಾರ್ಥಿ ಮೃತದೇಹವನ್ನು ಇಲ್ಲಿನ ರಾಯ ಚೂರು-ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿಟ್ಟು ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾ ರಿಗಳು ಆಗಮಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆ ಯೂ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.
ಈ ಹಂತದಲ್ಲಿ ಪೊಲೀಸರು ಉದ್ರಿಕ್ತ ಗ್ರಾಮಸ್ಥರನ್ನು ನಿಯಂ ತ್ರಿಸಲು ಅಶ್ರುವಾಯು ಸಿಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿ ದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿ ಭರವಸೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊತ್ನಾಳ್ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಗೊತ್ತಾಗಿದೆ.