ಬೆಂಗಳೂರು, ಡಿ.4: ಭಾರೀ ಮಳೆಯಿಂದ ಜಲ ಪ್ರಳಯಕ್ಕೆ ಸಿಲುಕಿ ತಮಿಳುನಾಡಿನ ಜನತೆ ಎದುರಿಸುತ್ತಿರುವ ಸಂಕಷ್ಟಕ್ಕೆ ಬೆಂಗಳೂರಿನ ಜನತೆ ತೀವ್ರ ಸಂತಾಪ ವ್ಯಕ್ತಪಡಿಸಿ ನೆರವಿನ ಮಹಾಪೂರ ಹರಿಸುತ್ತಿದ್ದಾರೆ.
ಬೆಂಗಳೂರಿನಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ತಮಿಳು ನಾಡಿಗೆ ನೆರವಿನ ಹಸ್ತ ಚಾಚಲು ಬೆಂಗಳೂರು ಜನತೆ ಮುಂದಾಗಿದ್ದಾರೆ. ಚೆನ್ನೈನಲ್ಲಿ ಸಂಕಷ್ಟದಲ್ಲಿರುವ ಜನತೆಗಾಗಿ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಹಾಗೂ ನಿರ್ದೇಶಕ ಪ್ರೇಮ್ 10 ಲಕ್ಷ ರೂ. ಚೆಕ್ಕನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸ್ವಯಂಪ್ರೇರಿತವಾಗಿ ಚೆನ್ನೈ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದು, ಮನೆಮಠ ಕಳೆದುಕೊಂಡವರಿಗೆ ಮಂಡಳಿಯಿಂದ ಸಾಧ್ಯವಾದ ನೆರವನ್ನು ನೀಡಲು ಸಿದ್ಧವಿದೆ. ಹಾಗೆಯೆ ನಗರದ ಒಂದು ತಂಡ ಮೂಲಭೂತ ವಸ್ತುಗಳಾದ ಕಂಬಳಿ, ಆಹಾರ ಸಾಮಗ್ರಿಗಳು, ಬಟ್ಟೆ ಹಾಗೂ ಔಷಧಿಗಳನ್ನು ಸಂಗ್ರಹಿಸುತ್ತಿದೆ.
ಐಟಿಬಿಟಿ ಉದ್ಯೋಗಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಅಭೂತಪೂರ್ವಕವಾಗಿ ಸ್ಪಂದಿಸಿರುವ ಬೆಂಗಳೂರಿನ ಜನತೆ ಆಹಾರ ಪದಾರ್ಥ, ಹೊದಿಕೆ ಹಾಗೂ ಬಟ್ಟೆಗಳನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ.
ರೇಡಿಯೋ ಸಿಟಿ ಎಫ್ಎಂ ವಾಹಿನಿಯ ಆರ್.ಜೆ.ಪ್ರದೀಪ ಅವರು ಸ್ವಯಂ ಸೇವಕರ ನೆರವಿನಿಂದ ಬೆಂಗಳೂರಿನಲ್ಲಿ ಪರಿಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದು, ಈ ಸಾಮಗ್ರಿಯನ್ನು ಚೆನ್ನೈ ಬಿಗ್ ಎಫ್ಎಂ ಆರ್ಜೆ ಬಾಲಾಜಿ ಅವರು ಚೆನ್ನೈನಲ್ಲಿ ವಿತರಿಸುವ ಕೆಲಸ ಮಾಡಲಿದ್ದಾರೆ.
ನಗರದ ಬನ್ನೇರುಘಟ್ಟ ರಸ್ತೆ, ಬಸವನಗುಡಿ, ಬನಶಂಕರಿ, ಕೆಂಗೇರಿ, ಬೆಳ್ಳಂದೂರು, ಬಿಟಿಎಂ ಬಡಾವಣೆ, ಲಕ್ಷ್ಮೀನಾರಾಯಣಪುರಂ, ಎಚ್ಎಸ್ಆರ್ ಬಡಾವಣೆ, ಜಯನಗರ, ಜೆಪಿನಗರ, ಕೋರಮಂಗಲ, ಕಲ್ಯಾಣನಗರ, ಮಲ್ಲೇಶ್ವರ, ಮತ್ತಿಕೆರೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಸಂಘ, ಸಂಸ್ಥೆಗಳು ಸಂಕಷ್ಟದಲ್ಲಿರುವ ತಮಿಳುನಾಡಿನ ಜನತೆಗಾಗಿ ಮೂಲಭೂತ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.
‘ಅಬ್ಬರದ ಮಳೆ ಸುರಿದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮಿಳುನಾಡಿಗೆ ಕರ್ನಾಟಕ ಸರಕಾರ ಮಾನವೀಯ ನೆಲೆಯಲ್ಲಿ 5ಕೋಟಿ ರೂ.ನೆರವು ನೀಡಿದ್ದು, ನೆರೆ-ಹೊರೆಯ ರಾಜ್ಯಗಳು ಸೌಹಾರ್ದದಿಂದ ಇರಬೇಕು. ಆದರೆ, ತಮಿಳುನಾಡು ಸರಕಾರ ರಾಜ್ಯದ ನೆರವು ನಿರಾಕರಿಸಿರುವುದು ವಿಷಾದದ ಸಂಗತಿ’
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ