ಬೆಂಗಳೂರು, ಡಿ.3: ವಿಶ್ವವನ್ನು ತಲ್ಲಣಗೊಳಿಸಿರುವ ಐಸಿಸ್ ಭಯೋತ್ಪಾದಕ ಸಂಘಟನೆಯ ಉಗಮದ ಕಾರಣಕರ್ತರನ್ನು ಪತ್ತೆ ಹಚ್ಚಬೇಕಾದ ಅಗತ್ಯವಿದೆ ಎಂದು ಅಂಜುಮನ್-ಎ-ಇಮಾಮಿಯಾ ಅಧ್ಯಕ್ಷ ಸಯ್ಯದ್ ಝಾಮಿನ್ ರಝಾ ತಿಳಿಸಿದ್ದಾರೆ.
ಗುರುವಾರ ನಗರದ ಜಾನ್ಸನ್ಮಾರ್ಕೆಟ್ ಬಳಿಯಿರುವ ಶಿಯಾ ಮಸೀದಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಅಲ್ ಖೈದಾ ಸಂಘಟನೆ ಇದೇ ಮಾದರಿಯಲ್ಲಿ ಆತಂಕವನ್ನು ಸೃಷ್ಟಿಸಿತ್ತು. ರಷ್ಯಾವನ್ನು ಸದೆಬಡಿಯಲು ಅಮೆರಿಕ ಅಲ್ ಖೈದಾವನ್ನು ಸೃಷ್ಟಿ ಮಾಡಿದ್ದು ಜಗಜ್ಜಾಹೀರಾಗಿದೆ ಎಂದರು.
ಇಂದು ಐಸಿಸ್ ಸಂಘಟನೆ ಬೆಳೆಯಲು ಯಾರು ಕಾರಣಕರ್ತರು ಎಂಬುದನ್ನು ಆಲೋಚನೆ ಮಾಡಬೇಕಿದೆ. ಐಸಿಸ್ ಸಂಘಟನೆಗೆ 40 ರಾಷ್ಟ್ರಗಳು ಧನಸಹಾಯ ಮಾಡುತ್ತಿವೆ. ಅವರಿಗೆ ಅಗತ್ಯವಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಯುದ್ಧ ಟ್ಯಾಂಕರ್ಗಳು, ಸ್ಫೋಟಕಗಳನ್ನು ಯಾರು ಪೂರೈಸುತ್ತಿದ್ದಾರೆ ಎಂಬುದರ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯಬೇಕು ಎಂದು ಅವರು ಒತ್ತಾಯಿಸಿದರು. ಇಸ್ಲಾಮ್ ಧರ್ಮ ಹಾಗೂ ಭಯೋತ್ಪಾದನೆ ನಡುವೆ ಸಂಬಂಧ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾನವ ಕುಲಕ್ಕೆ ಕಂಟಕಪ್ರಾಯವಾಗಿರುವ ಈ ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಝಾಮಿನ್ ರಝಾ ಹೇಳಿದರು.
ಶಾಂತಿ, ಸಹೋದರತೆಯ ಸಂದೇಶವನ್ನು ಸಾರುವ ಇಸ್ಲಾಮ್ ಧರ್ಮ, ಅಮಾಯಕರನ್ನು ಕೊಲ್ಲುವಂತಹ ಹಿಂಸೆಗೆ ಎಂದಿಗೂ ಪ್ರಚೋದನೆ ನೀಡುವುದಿಲ್ಲ. ಭಯೋತ್ಪಾದಕರಿಗೆ ಯಾವುದೇ ಧರ್ಮ ಇಲ್ಲ. ಸಮಾಜದ ಪ್ರತಿಯೊಬ್ಬರೂ ಇಂತಹ ಕೃತ್ಯಗಳನ್ನು ಮಾಡುವವರನ್ನು ಖಂಡಿಸಬೇಕು ಎಂದು ಅವರು ಆಗ್ರಹಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರಚೋದಿಸಿ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿರುವುದನ್ನು ನಾವು ಇತ್ತೀಚೆಗೆ ನೋಡುತ್ತಿದ್ದೇವೆ. ವಿದ್ಯಾವಂತ ಯುವ ಸಮೂಹ ಇಂತಹ ಪ್ರಚೋದನೆಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಝಾಮಿನ್ ರಝಾ ಹೇಳಿದರು.
ಪ್ರತಿ ಶುಕ್ರವಾರ ಮಧ್ಯಾಹ್ನದ ವಿಶೇಷ ಪ್ರಾರ್ಥನೆ ವೇಳೆ ಭಯೋತ್ಪಾದನೆಯಿಂದ ಮಾನವ ಕುಲದ ಮೇಲೆ ಬೀರುತ್ತಿರುವ ದುಷ್ಪರಿಣಾಮದ ಕುರಿತು ಎಲ್ಲ ಮಸೀದಿಗಳಲ್ಲಿ ಜಾಗೃತಿ ಸಂದೇಶಗಳ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಂಜುಮನ್-ಎ-ಇಮಾಮಿಯಾ ಕಾರ್ಯದರ್ಶಿ ಸಯ್ಯದ್ ಖಮರ್ ಹಸನ್, ವೌಲಾನ ಸಯ್ಯದ್ ಖಯ್ಯುಮ್ ಅಬ್ಬಾಸ್ ಹಾಗೂ ವೌಲಾನ ಅಬ್ಬಾಸ್ ಉಪಸ್ಥಿತರಿದ್ದರು.