ಬೆಂಗಳೂರು, ಡಿ.3: ಓದುವ ನೆಪದಲ್ಲಿ ಬೇರೆ ವಾಸವಿದ್ದ ಪತ್ನಿ ಬೇರೊಬ್ಬನೊಂದಿಗೆ ವಿವಾಹವಾದ ವಿಚಾರ ತಿಳಿದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಬಾವಿ ಎನ್ಜಿಇಎಫ್ ಲೇಔಟ್, 5ನೆ ಕ್ರಾಸ್ ನಿವಾಸಿ ಮುಕುಂದ (32) ಆತ್ಮಹತ್ಯೆ ಮಾಡಿಕೊಂಡ ಪತಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮುಕುಂದ ಅವರು 4 ವರ್ಷಗಳ ಹಿಂದೆ ಉಪನ್ಯಾಸಕಿ ಚೂಡಾಮಣಿ ಎಂಬುವರನ್ನು ಪ್ರೀತಿಸಿ ರಿಜಿಸ್ಟ್ರಾರ್ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಓದುವ ನೆಪದಲ್ಲಿ ಮನೆಯಿಂದ ಹೊರಗೆ ಉಳಿದಿದ್ದ ಚೂಡಾಮಣಿ ಅವರು ಬೇರೊಬ್ಬ ಯುವಕನನ್ನು ವಿವಾಹವಾಗಿದ್ದು, ನಿನ್ನೆ ಮುಕುಂದ ಅವರಿಗೆ ವಿಷಯ ಗೊತ್ತಾಗಿದೆ.
ಇದರಿಂದ ಮನನೊಂದ ಮುಕುಂದ ಅವರು ನಿನ್ನೆ ಮಧ್ಯಾಹ್ನ ಮನೆಗೆ ವಾಪಸ್ಸಾಗಿ ಡೆತ್ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಜ್ಞಾನಭಾರತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.