ಬೆಂಗಳೂರು, ನ. 26: ಮಹಾದಾಯಿ- ಕಳಸಾಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮೂರು ದಿನಗಳಿಂದ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ರೈತರು ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ತಿಂಗಳಿನಿಂದ ನರಗುಂದದಲ್ಲಿ ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದ್ದು, ಇದರ ಅಂಗವಾಗಿ ನಗರದಲ್ಲಿ ಮೂರು ದಿನಗಳಿಂದ ರೈತಾಪಿ ವರ್ಗ, ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ಈವರೆಗೆ ಸರಕಾರದ ಯಾವುದೇ ಪ್ರತಿನಿಧಿ ರೈತರನ್ನು ಭೇಟಿ ಮಾಡಿಲ್ಲ. ಇದರಿಂದ ಬೇಸತ್ತು ಬೀದಿಗೆ ಬಂದಿದ್ದೇವೆ ಎಂದು ರೈತರು ಕಿಡಿಕಾರಿದರು.
ಉತ್ತರ ಕರ್ನಾಟಕ ಭಾಗದ ರೈತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದರಿಂದ, ನಗರದ ಕೆ.ಆರ್.ರಸ್ತೆ, ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ ಹಾಗೂ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ 1 ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು. ಈ ವೇಳೆ ಪೊಲೀಸರು ಕೆಲ ರೈತರನ್ನು ಬಂಧಿಸಿ ವಶಕ್ಕೆ ಪಡೆದರು.
ಈ ಮೊದಲು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಶ್ವ ಕಲ್ಯಾಣ ಮಿಷನ್ ಚಾರಿಟೇಬಲ್ ಟ್ರಸ್ಟ್ನ ಬಸವಕುಮಾರ ಸ್ವಾಮೀಜಿ, ಕಳಸಾಬಂಡೂರಿ-ಮಹಾದಾಯಿ ಯೋಜನೆಯ ಜಾರಿಗಾಗಿ ನಾಲ್ಕು ತಿಂಗಳಿ ನಿಂದ ನರಗುಂದದಲ್ಲಿ ಹೋರಾಟ ನಡೆಯು ತ್ತಿದ್ದರೂ, ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ದೂರಿದರು.
ಕಳಸಾಬಂಡೂರಿ-ಮಹಾದಾಯಿ ಹೋರಾಟ ಸಮನ್ವಯ ಸಮಿತಿಯ ಅಧ್ಯಕ್ಷ ವೀರೇಶ ಸೊಬರಮಠ ಮಾತನಾಡಿ, ಕಾನೂನಿನ ಹೆಸರಿನಲ್ಲಿ ವಿಳಂಬ ಮಾಡಿದರೆ, ನ್ಯಾಯ ತಿರಸ್ಕರಿಸಿದಂತೆ. ಹೀಗಾಗಿ ರಾಜ್ಯ ಸರಕಾರ ನ್ಯಾಯಾಧೀಕರಣದ ಅವಧಿ ವಿಸ್ತರಣೆಗೆ ಅವಕಾಶ ನೀಡಬಾರದೆಂದು ಪಟ್ಟು ಹಿಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರಿಗೆ ರೈತರ ಸಮಸ್ಯೆಗಳನ್ನು ತಿಳಿಸಿ, ಮತ್ತೊಮ್ಮೆ ರೈತರ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿಗೆ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು.