ಹೊಸದಿಲ್ಲಿ, ನ.26: ಸಂವಿಧಾನ ದಿನದ ಸಂದರ್ಭದಲ್ಲಿ ಗೃಹ ಸಚಿವ ರಾಜ್ನಾಥ್ ಸಿಂಗ್ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಖಂಡಿಸಿ ಕಾಂಗ್ರೆಸ್ ಗದ್ದಲ ನಡೆಸುವುದರೊಂದಿಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಸಂಘರ್ಷದೊಂದಿಗೆ ಆರಂಭಗೊಂಡಿದೆ.
ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ”ಜಾತ್ಯತೀತ” ಎಂಬ ಪದ ಸಂವಿಧಾನದ ಮೂಲ ಪೀಠಿಕೆಯಲ್ಲಿ ಇಲ್ಲ ಎಂದು ಹೇಳುವ ಮೂಲಕ ರಾಜ್ನಾಥ್ ಸಿಂಗ್ ಲೋಕಸಭೆಯಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಿಂಗ್, ”ಜಾತ್ಯತೀತ” ಮತ್ತು ”ಸಮಾಜವಾದಿ” ಎಂಬ ಪದಗಳನ್ನು ಪೀಠಿಕೆಗೆ ತುರುಕಿಸಲಾಗಿದೆ ಎಂದು ನಾನು ಭಾವಿಸಿದ್ದೇನೆ. ‘ಜಾತ್ಯತೀತ’ ಎಂಬ ಪದ ಭಾರತೀಯ ರಾಜಕಾರಣದಲ್ಲಿ ಅತ್ಯಂತ ಹೆಚ್ಚು ದುರ್ಬಳಕೆಗೊಂಡ ಪದವಾಗಿದೆ ಎಂದರು.
42ನೆ ಸಂವಿಧಾನ ತಿದ್ದುಪಡಿಯ ಮೂಲಕ ಈ ಪದಗಳನ್ನು ಪೀಠಿಕೆಗೆ ತುರುಕಿಸಲಾಗಿದೆ ಎಂದರು.