ಬೆಂಗಳೂರು, ನ.8-ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಯ ನಾಗಾಲೋಟಕ್ಕೆ ಸಂಪೂರ್ಣ ತಡೆಯೊಡ್ಡಿದ್ದು, ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಜನತೆ ಬಿಜೆಪಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಉತ್ತರ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ಆಡಳಿತಕ್ಕೆ ಮನ್ನಣೆ ನೀಡಿದ್ದಾರೆ. ಈ ಚುನಾವಣಾ ಫಲಿತಾಂಶ ದೇಶದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಲಿದ್ದು, ಸರಿಯಾಗಿ ಕೆಲಸ ಮಾಡಿದರೆ ಪ್ರಾದೇಶಿಕ ಪಕ್ಷಗಳ ಅಲೆ ಶುರುವಾಗಲಿದೆ ಎಂಬ ಸಂದೇಶವನ್ನು ಈ ಚುನಾವಣಾ ಫಲಿತಾಂಶ ನೀಡಿದೆ ಎಂದರು.
ಮುಂದಿನ ಚುನಾವಣೆಗಳಲ್ಲಿ ಮೋದಿಯವರಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿ. ಒಂದೂವರೆ ವರ್ಷದಲ್ಲಿ ಬರೀ ಭಾಷಣ, ಮಾತಲ್ಲೇ ಕಾಲ ಕಳೆದಿದ್ದಾರೆ. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ನಿತೀಶ್ಕುಮಾರ್ ಅವರ ಡಿಎನ್ಎ ಪರೀಕ್ಷೆ ಮಾಡಬೇಕೆಂಬ ಲಘುವಾದ ಹೇಳಿಕೆಯೇ ಬಿಜೆಪಿ ಹಿನ್ನಡೆಗೆ ಕಾರಣ. ಮೋದಿಯವರು ನೀಡಿದ ಒಂದು ಕಾಲು ಲಕ್ಷ ಅನುದಾನದ ಭರವಸೆಗೆ ಬಿಹಾರದ ಜನತೆ ಮರುಳಾಗಿಲ್ಲ. ಮುಂಬರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಚುನಾವಣೆಯಲ್ಲೂ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಲಿದ್ದು, ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.