ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಾಹನಗಳ ಮೇಲೆ ದಾಳಿಗಿಳಿದಿದ್ದ ಆರ್’ಟಿಒ ಅಧಿಕಾರಿಗಳು ಮಂಗಳವಾರವಷ್ಟೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಕಾರನ್ನು ಜಪ್ತಿ ಮಾಡಿದ್ದರು. ಇದರಂತೆ ಬುಧವಾರ ಕೂಡ ಹಾಸ್ಯ ನಟ ಹಾಗೂ ಬಿಜೆಪಿ ಮುಖಂಡ ಬುಲೆಟ್ ಪ್ರಕಾಶ್ ಅವರ ಫಾರ್ಚೂನರ್ ಕಾರನ್ನು ಜಪ್ತಿ ಮಾಡಿದ್ದಾರೆ.
ಗೊರಗುಂಟೆ ಪಾಳ್ಯದಲ್ಲಿ ಬುಲೆಟ್ ಪ್ರಕಾಶ್ ಅವರ ಕಾರನ್ನು ಅಡ್ಡಗಟ್ಟಿದ ಆರ್’ಟಿಒ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ. ಬುಲೆಟ್ ಪ್ರಕಾಶ್ ಅವರು ಖರೀದಿಸಿದ್ದ ಕಾರಿಗೆ ನಂಬರ್ ಪ್ಲೇಟ್’ನ್ನು ಅಳವಡಿಸಿರಲಿಲ್ಲ, ಅಲ್ಲದೆ, 5.36 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಬುಲೆಟ್ ಪ್ರಕಾಶ್ ಅವರು, ಕಾರನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಖರೀದಿಸಲಾಗಿತ್ತು. ಕಾರಿಗೆ ಸಂಖ್ಯಾಶಾಸ್ತ್ರದ ಸಂಖ್ಯೆಯನ್ನು ನೋಂದಣಿ ಮಾಡಿಸಲು ಎದುರು ನೋಡಲಾಗಿತ್ತು. ಕೆಲವು ಕಾರ್ಯ ಒತ್ತಡಗಳಿಂದಾಗಿ ಈ ಬಗ್ಗೆ ಗಮನಹರಿಸಲು ಸಾಧ್ಯವಾಗಿರಲಿಲ್ಲ. ಇದನ್ನು 10 ದಿನಗಳ ಮುಂಚೆಯೇ ಮಾಡಬೇಕಿತ್ತು. ಆದರೆ ಮಾಡಲು ಸಾಧ್ಯವಾಗಿರಲಿಲ್ಲ. ನನ್ನ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ತಪ್ಪಿಗೆ ಇದೀಗ ರು.1 ಸಾವಿರ ದಂಡ ಕಟ್ಟಲಾಗಿದೆ ಎಂದು ಹೇಳಿದ್ದಾರೆ.