ಬೆಂಗಳೂರು: ಅಡುಗೆ ಕೋಣೆಯಲ್ಲಿ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಉಪನಗರದಲ್ಲಿ ಜರುಗಿದೆ. ರಮೇಶ್ (45) ಮತ್ತು ರಶ್ಮಿ (35) ಆತ್ಮಹತ್ಯೆಗೆ ಶರಣಾದ ದಂಪತಿ.
ನೆಲಮಂಗಲ ಮೂಲದ ಈ ದಂಪತಿ ಎಸ್ ಪ್ರಿಂಟರ್ಸ್ ಎಂಬ ಪ್ರಿಂಟಿಂಗ್ ಏಜೆನ್ಸಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಹೃತಿಕ್ ಮನೆಯಲ್ಲಿ ಟಿವಿ ನೋಡುತ್ತಿದ್ದ. ಅಡುಗೆ ಮನೆಯಿಂದ ನರಳಾಟ ಶಬ್ದ ಕೇಳಿಸಿದೆ. ತಕ್ಷಣ ಹೋಗಿ ನೋಡಿದಾಗ ಪೋಷಕರು ಬಾಯಲ್ಲಿ ನೊರೆ ಕಾರಿಕೊಂಡು ಒದ್ದಾಡುತ್ತಿರುವುದು ಕಂಡು ಬಂದಿದೆ.
ಗಾಬರಿಗೊಂಡ ಹೃತಿಕ್ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಶಯ ತಿಳಿಸಿದ್ದಾನೆ. ಕೆಲ ಹೊತ್ತಿಗೆ ಮನೆಗೆ ಧಾವಿಸಿದ ಸಂಬಂಧಿಕರು ಒದ್ದಾಡುತ್ತಿದ್ದ ದಂಪತಿಯನ್ನು ಚಿಕಿತ್ಸೆ ಕೊಡಿಸಲು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ವೇಳೆ ಸ್ಥಿತಿ ಗಂಭೀರವಾಗಿದ್ದರಿಂದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಿಜಿಎಸ್ ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ಮಾರ್ಗ ಮಧ್ಯದಲ್ಲೇ ದಂಪತಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವ್ಯವಹಾರದಲ್ಲಿ ನಷ್ಟ ಹಾಗೂ ಸಾಲಬಾಧೆ ದಂಪತಿ ಆತ್ಮಹತ್ಯೆಗೆ ಕಾರಣ ಇರಬಹುದೆಂದು ಸಂಬಂದಿಕರು ತಿಳಿಸಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.