ಬೆಂಗಳೂರು, ನ. 4: ಬಿಬಿಎಂಪಿ ಪೌರ ಕಾರ್ಮಿಕರು ನಾಟಿ ಮದ್ದು ಬಿಟ್ಟು, ಪಾಲಿಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಮೇಯರ್ ಮಂಜುನಾಥ್ ರೆಡ್ಡಿ ಸಲಹೆ ನೀಡಿದ್ದಾರೆ. ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ಕುಮಾರ್ ಸಭಾಂಗಣದಲ್ಲಿ ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ಆಯೋಜಿಸಿದ್ದ, ‘ವಿಶ್ವ ಮಧುಮೇಹ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಬಿಎಂಪಿಯ ಪೌ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆರೋಗ್ಯದಲ್ಲಿ ಏರುಪೇರು ಆದರೆ, ತಮಿಳುನಾಡಿನ ನಾಟಿ ಮದ್ದು ಪಡೆಯುತ್ತಿದ್ದಾರೆ. ಎಲ್ಲದಕ್ಕೂ ನಾಟಿ ಮದ್ದು ಸೂಕ್ತವಲ್ಲ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಪಡೆಯುವಂತೆ ಮಂಜುನಾಥ್ ರೆಡ್ಡಿ ಸೂಚಿಸಿದರು.
ಸಂಘ-ಸಂಸ್ಥೆಗಳು ಬಿಬಿಎಂಪಿ ಪೌರ ಕಾರ್ಮಿಕರಿಗೆ ಉಚಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, ಬೆಂಗಳೂರಿನಲ್ಲೂ ಸಕ್ಕರೆ ಕಾಯಿಲೆ ಹೆಚ್ಚಾಗಿದೆ. ಅದೇ ರೀತಿ, ಇಲ್ಲಿನ ವಾತಾವರಣ ಹದಗೆಟ್ಟಿದೆ. ಸಮಯ-ಸಂದರ್ಭವಿಲ್ಲದೆ ಮಳೆ-ಬಿಸಿಲು ಬರುವುದರಿಂದ ರೋಗಗಳು ಹೆಚ್ಚಾಗಬಹುದು ಎಂದು ಅವರು ತಿಳಿಸಿದರು.
ನನಗೂ ಸಕ್ಕರೆ ಕಾಯಿಲೆ: 18 ವರ್ಷಗಳಿಂದ ನನ್ನಲ್ಲೂ ಸಕ್ಕರೆ ಕಾಯಿಲೆ ಇದೆ ಎಂದ ಮೇಯರ್ ಮಂಜುನಾಥ್ ರೆಡ್ಡಿ, ಈ ಕಾಯಿಲೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವೈದ್ಯರ ಸಲಹೆಗಳನ್ನು ಪಡೆದರೆ ಖಂಡಿತ ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು ಎಂದರು.
ಬೆಂಗಳೂರು ಡಯಾಬಿಟಿಸ್ ಆಸ್ಪತ್ರೆಯ ಸಿಇಒ ಡಾ.ಕೆ.ಎಂ.ಪ್ರಸನ್ನಕುಮಾರ್ ಮಾತನಾಡಿ, ಇದೊಂದು ಗಂಭೀರ ಕಾಯಿಲೆಯಾಗಿದ್ದರೂ, ಬಡವರು ನಿರ್ಲಕ್ಷ ವಹಿಸುತ್ತಿದ್ದಾರೆ. ಹೀಗಾಗಿ, ಮಧುಮೇಹ ರೋಗದ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದರು.ಸಮಾರಂಭದಲ್ಲಿ ಉಪಮೇಯರ್ ಹೇಮಲತಾ, ಪಾಲಿಕೆ ಆರೋಗ್ಯ ಸ್ಥಾಯಿ-ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷ, ಫೌಂಡೇಶನ್ ಟ್ರಸ್ಟಿ ಮೆಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.