ಬೆಳಗಾವಿ, ಅ.19: ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಿನ ಮಧ್ಯೆ ನಾಲ್ಕೈದು ತಿಂಗಳಿಂದ ನೂರಾರು ಕೋಳಿ ಮರಿಗಳು ಪ್ರತ್ಯಕ್ಷವಾಗುತ್ತಿದ್ದು, ಕಾಡಂಚಿನ ಗ್ರಾಮಗಳ ಜನರ ನಿದ್ದೆಗೆಡಿಸಿವೆ. ಯಾರು ಈ ಮರಿಗಳನ್ನು ಇಲ್ಲಿಗೆ ಬಿಡುತ್ತಿದ್ದಾರೆ? ಇದರ ಹಿಂದಿನ ಉದ್ದೇಶವೇನು..? ಎನ್ನುವ ಪ್ರಶ್ನೆ ಇಲ್ಲಿನ ಜನರನ್ನು ಕಾಡುತ್ತಿದೆ.
ಖಾನಾಪುರ ತಾಲೂಕಿನ ಕುಪ್ಪಟಗಿ, ಇದ್ದಿಲಹೊಂಡ ಹಾಗೂ ಬೆಳಗಾವಿ ತಾಲೂಕಿನ ದೇಸೂರ, ಕಾಟಾಗಳಿ ಗ್ರಾಮದ ಹೊರವಲಯದಲ್ಲಿ ನೂರಾರು ಸಂಖ್ಯೆಯಲ್ಲಿ ಕೋಳಿ ಮರಿಗಳು ಕಂಡುಬಂದಿದೆ. ಸದ್ಯ ದ್ವಿಚಕ್ರ ವಾಹನ ಸವಾರರು ಮರಿಗಳನ್ನು ಹಿಡಿದು ಚೀಲಗಳಲ್ಲಿ ಹಾಕಿಕೊಂಡು ಹೋಗುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಈ ಕುರಿತು ಕೆಲವರು ಭಾನಾಮತಿ ಕಾಟ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಮಾಟ-ಮಂತ್ರ ಎಂದು ಹೇಳುತ್ತಿದ್ದಾರೆ. ಆದರೆ ಕಾಡಿನಲ್ಲಿ ಕೋಲಾಹಲವೆಬ್ಬಿಸಿರುವ ಕೋಳಿಮರಿಗಳ ಕುರಿತು ಬೆಳಗಾವಿ ಅರಣ್ಯ ಇಲಾಖೆಗೆ ಮಾತ್ರ ಯಾವುದೇ ಮಾಹಿತಿ ಇಲ್ಲ ಎಂದು ಡಿಎಫ್ಓ ಬಸವರಾಜ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.