ಬೆಂಗಳೂರು, ಸೆ.30- ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಬಿಬಿಎಂಪಿ ಸದಸ್ಯರು ಸಹಕಾರ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಕಾಸಸೌಧದಲ್ಲಿಂದು ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಕುರಿತಂತೆ ಪಾಲಿಕೆ ಸದಸ್ಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ಲಾಸ್ಟಿಕ್ ಕವರ್ಗಳು, ತಟ್ಟೆ, ಲೋಟ ನಿಷೇಧಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ರಸ್ತೆ ಬದಿ ಎಲ್ಲೆಂದರಲ್ಲಿ ಡಬ್ರೀಜ್ಗಳನ್ನು ಬಿಸಾಡಿರುತ್ತಾರೆ. ಪಾಲಿಕೆ ಅಧಿಕಾರಿಗಳು ಇದನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಮೊದಲು ಇವುಗಳನ್ನು ವಿಲೇವಾರಿ ಮಾಡಿಸಲು ಪಾಲಿಕೆ ಸದಸ್ಯರು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲು ಸಾಧ್ಯವಾಗುವುದಿಲ್ಲ. ಕೆಲವು ವಸ್ತುಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ಈ ಹಿಂದೆಯೇ ಪ್ಲಾಸ್ಟಿಕ್ ನಿಷೇಧಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಈಗ ಸರ್ಕಾರ ಇದನ್ನು ನಿಷೇಧ ಮಾಡಿದರೆ ನಾವೆಲ್ಲಾ ಸಹಕರಿಸುತ್ತೇವೆ ಎಂದು ಹೇಳಿದರು.
ಶೂನ್ಯ ತ್ಯಾಜ್ಯ: ಪ್ರತಿವಾರ್ಡ್ನಲ್ಲಿ ಶೂನ್ಯ ತ್ಯಾಜ್ಯ ಕಾರ್ಯಕ್ರಮ ಈ ಮೊದಲು ಇತ್ತು. ಈಗ ಅದು ನಿಂತು ಹೋಗಿದೆ. ಕೂಡಲೇ ಈ ಕಾರ್ಯಕ್ರಮವನ್ನು ಪುನರಾರಂಭಿಸಿ ಎಂದು ಸದಸ್ಯರಿಗೆ ಸಿದ್ದರಾಮಯ್ಯ ಸೂಚಿಸಿದರು. ಯಾರು ಯಾವ ವಾರ್ಡ್ನಲ್ಲಿ ಶೂನ್ಯ ತ್ಯಾಜ್ಯ ಮಾಡುತ್ತಾರೋ ಅವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.