ಚಿತ್ರದುರ್ಗ, ಸೆ.25- ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಹಕರಿಸುವಂತೆ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಳಸಾ-ಬಂಡೂರಿ ಯೋಜನೆ ವಿಷಯದಲ್ಲಿ ರಾಜಕೀಯ ಮಾಡಬಾರದು. ಇದು ರಾಜ್ಯದ ಹಿತಾಸಕ್ತಿಯ ವಿಷಯ.
ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಕಳಸಾ-ಬಂಡೂರಿ ಯೋಜನೆ ಕುರಿತು ಚರ್ಚೆ ನಡೆಸಲು ನೆರೆಯ ರಾಜ್ಯಗಳಿಗೆ ಮೂರು ದಿನಗಳ ಪತ್ರ ಬರೆಯಲಾಗಿದೆ. ಆದರೆ, ಈವರೆಗೂ ಉತ್ತರ ಬಂದಿಲ್ಲ. ಅವರ ಪ್ರತಿಕ್ರಿಯೆಯ ರೀಕ್ಷೆಯಲ್ಲಿರುವುದಾಗಿ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.
ಸಿದ್ದು ವಿರುದ್ಧ ವಾಗ್ದಾಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದೊಂದಿಗೆ ಸೌರ್ಹಾದಯುತ ಬಾಂಧವ್ಯ ಇಟ್ಟುಕೊಳ್ಳುವ ಬದಲಾಗಿ ಸಂಘರ್ಷಕ್ಕೆ ಮುಂದಾಗಿದ್ದಾರೆ. ಇದರಿಂದ ಕೇಂದ್ರ ಮತ್ತು ರಾಜ್ಯದ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆದಿರುವ ನೀತಿ ಆಯೋಗದ ಸಭೆಗೂ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು. ಬೆಂಗಳೂರಿಗೆ ಬಂದು ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಈಗಾಗಲೇ ಕೊಟ್ಟಿರುವ ಅನುದಾನದ ಲೆಕ್ಕ ನೀಡಿಲ್ಲ. ಬಹಿರಂಗವಾಗಿ ಮೋದಿ ಅವರನ್ನು ಟೀಕೆ ಮಾಡುತ್ತಾರೆ. ಇದು ಒಳ್ಳೆಯ ಮುತ್ಸದ್ಧಿಯ ಲಕ್ಷಣ ಅಲ್ಲ. ರಾಜ್ಯದ ಹಿತರಕ್ಷಣೆಗಾಗಿ ಕೇಂದ್ರದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕೆಂದು ಸದಾನಂದಗೌಡ ಸಲಹೆ ನೀಡಿದರು.