ಬೆಂಗಳೂರು, ಜು.14-ಹೊಸಕೋಟೆಯಲ್ಲಿರುವ ವೋಲ್ವೊ ಬಸ್ ಕಾರ್ಪೊರೇಷನ್ ಘಟಕವನ್ನು 975 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸ್ವೀಡನ್ನ ವೋಲ್ವೊ ಬಸ್ ಕಾರ್ಪೊರೇಷನ್ ಅಧ್ಯಕ್ಷ ಹಾಕನ್ ಅಗ್ನೇವಾಲ್ ಅವರೊಂದಿಗೆ ವಿಧಾನಸೌಧದ ತಮ್ಮ ಕೊಠಡಿಯಲ್ಲಿ
ಮಾತುಕತೆ ನಡೆಸಿದ ಬಳಿಕ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸಕೋಟೆಯಲ್ಲಿ ಈಗಾಗಲೇ 150 ಎಕರೆ ಪ್ರದೇಶದಲ್ಲಿ ವೋಲ್ವೊ ಕಂಪೆನಿ ಘಟಕ ಹೊಂದಿದೆ. ಇನ್ನೂ 90 ಎರಕೆ ಭೂಮಿ ಖರೀದಿ ಮಾಡಿ ಘಟಕವಿಸ್ತರಣೆಗೆ ವೋಲ್ವೊ ಕಂಪೆನಿ ಮುಂದಾಗಿದೆ. ಬಸ್ಗಳನ್ನು ತಯಾರಿಸಿ ಯೂರೋಪ್ಗೆ ರಫ್ತು ಮಾಡುವ ಯೋಜನೆ ಹೊಂದಿದ್ದು, ಇದರಿಂದ 2125 ಮಂದಿಗೆ ಉದ್ಯೋಗ ಸಿಗಲಿದೆ. ಇದು ಕಾರ್ಯಗತವಾದರೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಯೂರೋಪ್ಗೆ ಬಸ್ ಕಳಿಸಿದಂತಾಗುತ್ತದೆ.ಮೊದಲ ಬಸ್ ಜು.21ರಂದು ರವಾನೆಯಾಗಲಿದೆ ಎಂದು ತಿಳಿಸಿದರು. ವೋಲ್ವೊ ಬಸ್ ಅಧ್ಯಕ್ಷರು ಸ್ವೀಡನ್ಗೆ ಆಗಮಿಸುವಂತೆ ಆಹ್ವಾನ ನೀಡಿದ್ದು, ಆಗಸ್ಟ್ ಬಳಿಕ ಬರುವುದಾಗಿ ಅವರಿಗೆ ಹೇಳಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಸರ್ಕಾರ ನಡೆಸಲು ಉದ್ದೇಶಿಸಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ವೋಲ್ವೊ ಬಸ್
ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ ಎಂದರು. ಪ್ರಧಾನಿ ಸಭೆಗೆ ಗೈರು :
ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಕರೆದಿರುವ ಸಭೆಗೆ ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ತಮ್ಮ ಪರವಾಗಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಪ್ರಧಾನಿ ಕರೆದಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಪ್ರಧಾನಿ ಅವರು ಕರೆದಿದ್ದ ನೀತಿ ಆಯೋಗದ ಸಭೆಯಲ್ಲಿ ತಾವು ಭಾಗವಹಿಸಿದ್ದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವೋಲ್ವೊ ಕಾರ್ಪೊರೇಷನ್ ಅಧ್ಯಕ್ಷ ಹಾಕನ್ ಅಗ್ನೇವಾಲ್ ನೇತೃತ್ವದ ತಂಡ ಮುಖ್ಯಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನರಸಿಂಹರಾಜು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಹಾಜರಿದ್ದರು.