ಸುವರ್ಣಸೌಧ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈಗ ತಮಿಳು ಭಾಷೆ ಕಲಿಕೆಗಾಗಿ ರ್ಯಾಪಿಡೆಕ್ಸ್ ಸ್ಪೀಕಿಂಗ್ ಪುಸ್ತಕದ ಮೊರೆ ಹೋಗಿದ್ದಾರೆ.
ರವಿ ಅವರಿಗ್ಯಾಕೆ ತಮಿಳು ಕಲಿವ ಪರಿಸ್ಥಿತಿ ಬಂತು ಎಂದು ಅಚ್ಚರಿಯಾಗಬಹುದು. ತಮಿಳುನಾಡಿನ ಬಿಜೆಪಿ ಸಹ ಉಸ್ತುವಾರಿಯನ್ನಾಗಿ ರವಿ ಅವರನ್ನು ಕಳೆದ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಿಸಿದ್ದರು. ಹೀಗಾಗಿ, ತಮಿಳುನಾಡಿನ ಮುಖಂಡರೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಆ ರಾಜ್ಯದ ಭಾಷೆಯನ್ನು ಕನಿಷ್ಠ ಪ್ರಮಾಣದಲ್ಲಿಯಾದರೂ ಕಲಿಯದಿದ್ದರೆ ಪಕ್ಷ ಸಂಘಟನೆಗೆ ಕಷ್ಟವಾದೀತು ಎಂಬ ಉದ್ದೇಶದಿಂದ ಕಲಿಕೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಹಿಂದಿ ಭಾಷೆ ಬಳಕೆ ಮಾಡಲು ಆಗುವುದಿಲ್ಲ. ಇನ್ನು ಸಭೆ-ಸಮಾರಂಭಗಳಲ್ಲಿ ನಾನು ಇಂಗ್ಲಿಷ್ ಮಾತನಾಡಿದರೆ ಅದನ್ನು ತರ್ಜುಮೆ ಮಾಡಿಸಬಹುದು. ಆದರೆ, ಅಲ್ಲಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭಾವನೆಗಳನ್ನು ಅರಿತುಕೊಳ್ಳಲು ಅವರೊಂದಿಗೆ ನೇರ ಸಂವಾದ ನಡೆಸಲು ಸಾಧ್ಯವಾಗುವಂತೆ ಅವರ ಭಾಷೆ ಮಾತನಾಡಲು-ಅರ್ಥೈಸಿಕೊಳ್ಳಲು ನಿರ್ಧರಿಸಿದ್ದೇನೆ. ಇದಕ್ಕಾಗಿ ರ್ಯಾಪಿಡೆಕ್ಸ್ ಸ್ಪೀಕಿಂಗ್ ಪುಸ್ತಕ ಸೇರಿದಂತೆ ಕಲಿಕಾ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದು ತಿಳಿಸಿದರು.