ಬೆಳಗಾವಿ: ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಸೇರಲು ಸಿದ್ದವಾಗಿದ್ದರು. ಈ ಬಗ್ಗೆ ಸುತ್ತೂರು ಮಠದಲ್ಲಿ ಮಾತುಕತೆ ನಡೆದಿತ್ತು. ಆದರೆ ಸಿದ್ದರಾಮಯ್ಯ ಬಿಜೆಪಿ ಸೇರದಂತೆ ಕಾಂಗ್ರೆಸ್ ನ ಇಬ್ಬರು ನಾಯಕರು ತಡೆದು, ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಮಾಡಿದ್ದರು ಎಂಬ ವಿಷಯವನ್ನು ಬಿಜೆಪಿಯ ಗೋ ಮಧೂಸೂದನ್ ಗುರುವಾರ ವಿಧಾನಪರಿಷತ್ ನಲ್ಲಿ ಬಯಲು ಮಾಡಿದರು.
ಗುರುವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಕಲಾಪದಲ್ಲಿ ಗೋ ಮಧುಸೂದನ್ ಈ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೂ ಮೊದಲು ಮಾತನಾಡಿದ್ದ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕೂಡಾ, ಸಿದ್ದರಾಮಯ್ಯನವರು ಜೆಡಿಎಸ್ ತೊರೆದ ಸಂದರ್ಭದಲ್ಲಿ ಬಿಜೆಪಿ ಸೇರಲು ತಯಾರಾಗಿದ್ದರು ಎಂಬ ವಿಷಯವನ್ನು ಬಿಚ್ಚಿಟ್ಟಿದ್ದರು. ಆದರೆ ಕೊನೆಗೆ ಕಾಂಗ್ರೆಸ್ ಪಕ್ಷ ಸೇರಿದರು. ಹಣೆಬರಹ ಚೆನ್ನಾಗಿತ್ತು, ಹಾಗಾಗಿ ವಿಪಕ್ಷ ನಾಯಕನಾಗಿ, ಇದೀಗ ಮುಖ್ಯಮಂತ್ರಿಯಾಗಿದ್ದಾರೆ ಎಂದರು.
ಬಳಿಕ ಮಾತನಾಡಿದ ಗೋ ಮಧುಸೂದನ್, ಸಿದ್ದರಾಮಯ್ಯನವರು ಬಿಜೆಪಿ ಸೇರಲು ಸಿದ್ದತೆ ನಡೆಸಿದಾಗ, ಕಾಂಗ್ರೆಸ್ ನ ಎಚ್.ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣ ಅವರಿಂದಾಗಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರುವಂತಾಗಿತ್ತು. ಇಬ್ಬರೂ ಸಿದ್ದರಾಮಯ್ಯನವರನ್ನು ಪೀಡಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು ಎಂದು ಹೇಳಿದರು.
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ನ ಉಗ್ರಪ್ಪ, ಸಿಎಂ ಶಿಷ್ಯನಾಗಿ ಇದನ್ನೆಲ್ಲಾ ಪ್ರಸ್ತಾಪಿಸುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಎಚ್.ಎಂ.ರೇವಣ್ಣ ಮಾತನಾಡಿ, ಸಿದ್ದರಾಮಯ್ಯನವರಿಗೆ ಜೆಡಿಎಸ್ ಪಕ್ಷದಲ್ಲಿ ಅನ್ಯಾಯವಾಗಿತ್ತು. ಹಾಗಾಗಿ ನಾವು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿರುವುದಾಗಿ ಸಮಜಾಯಿಷಿ ನೀಡಿದರು.
-ಉದಯವಾಣಿ