ಬೆಂಗಳೂರು, ಜು.5: ವಿದ್ಯುತ್ ಕಂಬಕ್ಕೆ ಹತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಹರಿದ ಪರಿಣಾಮ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಲೈನ್ಮ್ಯಾನ್ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಫ್ರೇಜರ್ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಬೆಸ್ಕಾಂ ಕಾರ್ಯಾಚರಣೆ ನಿರ್ವಹಣಾ ಕೇಂದ್ರದ ಲೈನ್ಮ್ಯಾನ್ ಸುರೇಶ್ ಬಾಬು (48) ಮೃತಪಟ್ಟವರು. ಕೋಲ್ಸ್ಪಾರ್ಕ್ನ ಮಸೀದಿ ರಸ್ತೆಯ ಬಳಿ ಇಂದು ಬೆಳಿಗ್ಗೆ ವಿದ್ಯುತ್ ಸ್ಥಗಿತಗೊಂಡಿತ್ತು.
ಸ್ಥಳೀಯ ನಿವಾಸಿಗಳು ಈ ಬಗ್ಗೆ ಕೆಇಬಿ ಕಚೇರಿಗೆ ದೂರು ಸಲ್ಲಿಸಿದ್ದರು. ತಕ್ಷಣ ಕರ್ತವ್ಯದಲ್ಲಿದ್ದ ಸುರೇಶ್ ಎಲ್ಲಾ ಲೈನ್ಗಳನ್ನು ಆಫ್ ಮಾಡಿ ಸ್ಥಳಕ್ಕೆ ತೆರಳಿ ಕಂಬ ಏರಿ ಅಲ್ಲಿ ಪರಿಶೀಲಿಸುತ್ತಿದ್ದರು. ಆದರೆ, ಸಮೀಪದ ಮನೆಯಲ್ಲಿ ವಿದ್ಯುತ್ ಸ್ಥಗಿತಗೊಂಡಾಗ ಸ್ವಯಂ ಚಾಲಿತವಾಗಿ ಆನ್ ಆಗುವ ಜನರೇಟರ್ನಿಂದ ವಿದ್ಯುತ್ ಹರಿದು ಅವರು ಮೃತಪಟ್ಟಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫ್ರೇಜರ್ ಟೌನ್ನಲ್ಲಿನ ಬೆಸ್ಕಾಂ ವಸತಿ ಗೃಹದಲ್ಲಿ ಸುರೇಶ್ ವಾಸಿಸುತ್ತಿದ್ದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.