ಬೆಂಗಳೂರು,ಜೂ.22- ಎಂಎಸ್ಐಎಲ್ ಮಾದರಿಯಲ್ಲಿ ರಾಜ್ಯದ ಆಯ್ದ 11 ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರು ನಗರದಲ್ಲಿ ಎರಡು ವೈನ್ ಬೋಟಿಕ್ ಸ್ಥಾಪನೆ ಮಾಡಲು ಕರ್ನಾಟಕ ದ್ರಾಕ್ಷಾರಸ ಮಂಡಳಿ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ
ಮತ್ತು ನಿರ್ದೇಶಕ ಬತ್ತಪ್ಪ ಕೋಟೆ, ಬೆಂಗಳೂರಿನಲ್ಲಿ ಎರಡು ವೈನ್ ಬೋಟಿಕ್ ಹಾಗೂ ದ್ರಾಕ್ಷಾ ಮಂಡಳಿಯಲ್ಲಿ ವೈನ್ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದರು. ಬೋಟಿಕ್ಗಳಲ್ಲಿ ಸುಸಜ್ಜಿತ ಹವಾನಿಯಂತ್ರಿತ ಮಳಿಗೆಗಳು ಹಾಗೂ ವಾಕಿಂಗ್ ಸೌಲಭ್ಯವನ್ನು ಹೊಂದಿದ್ದು , ವೈನ್ ಸೇವನೆಯ ಬಗ್ಗೆ ಪೂರ್ಣ ಮಾಹಿತಿ ಹಾಗೂ ಗ್ರಾಹಕರಿಗೆ ಆಕರ್ಷಕ ರೀತಿಯ ಕೊಡುಗೆಗಳು, ವೈನ್ ಪರಿಕರಗಳ, ಮಾರಾಟ ವೈಜ್ಞಾನಿಕವಾಗಿ ವೈನ್ ಬಾಟಲಿಗಳ ಶೇಖರಣೆ ಮಾಡುವ ಜೊತೆಗೆ ಮಹಿಳೆಯರು ವೈನ್ ಖರೀದಿಸಲು ಅನುಕೂಲಕರವಾದ ವಾತಾವರಣ ಕಲ್ಪಿಸಿ ಮಂಡಳಿಗೆ ಆದಾಯ ಹೆಚ್ಚಿಸುವುದು ಈ ಬೊಟಿಕ್ಗಳ ವಿಶೇಷ ಎಂದರು.
ದ್ರಾಕ್ಷಾರಸ ಉತ್ಸವವನ್ನು ಮೈಸೂರು, ಹುಬ್ಬಳ್ಳಿ , ಧಾರವಾಡ, ಬೆಳಗಾವಿ, ಬೀದರ್, ದಾವಣಗೆರೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಮಳೆಗಾಲದ ನಂತರ ಕೊಡಗಿನಲ್ಲಿ ಉತ್ಸವ ನಡೆಸಲಾಗುತ್ತದೆ. ಮತ್ತೆ ಮೈಸೂರು, ಹುಬ್ಬಳ್ಳಿ, ಬೆಳಗಾವಿ,ಬೀದರ್, ರಾಮನಗರ, ದಾವಣಗೆರೆ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ದ್ರಾಕ್ಷಾರಸ, ದ್ರಾಕ್ಷಿ ಬೆಳೆಗಳ ಬೇಸಾಯ ಹಾಗೂ ಮಾರುಕಟ್ಟೆ ವಿಚಾರಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ವಿಚಾರ ಸಂಕಿರಣಗಳನ್ನು ನಡೆಸಲಿದ್ದೇವೆ ಎಂದು ತಿಳಿಸಿದರು. ಕಳೆದ ವರ್ಷ 63.08 ಲಕ್ಷ ಲೀಟರ್ ದ್ರಾಕ್ಷಾರಸವನ್ನು 178 ಕೋಟಿ ರೂ.ಗೆ ಮಾರಾಟ ಮಾಡಿದೆ. ಈಗಾಗಲೇ 17 ವೈನರಿಗಳು ಕಾರ್ಯ ನಿರ್ವಹಿಸುತ್ತಿದ್ದು , ಖಾಸಗಿ ವೈನ್ ಸಂಸ್ಥೆ ಸೇರಿದಂತೆ 195 ಬೋಟಿಕ್ ಸ್ಥಾಪನೆಯಾಗಿವೆ. ತಿನ್ನುವ ದ್ರಾಕ್ಷಿ ಮತ್ತು ವೈನ್ ದ್ರಾಕ್ಷಿ ಬೇರೆ ಬೇರೆಯಾಗಿದ್ದು , ವೈನ್ ದ್ರಾಕ್ಷಿಯನ್ನು ತಿನ್ನಲು ಬಳಸುವಂತಿಲ್ಲ ಎಂದರು.