ಚಿಕ್ಕಮಗಳೂರು, ಜೂ.22: ಕಾಫಿ ಬೀಜದ ಮೂಟೆ ತುಂಬಿಕೊಂಡು ಸಾಗುತ್ತಿದ್ದ ಲಾರಿ ಮೇಲೆ ಭಾರೀ ಗಾತ್ರದ ಮರ ಬುಡಸಮೇತ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಲಾರಿ ಸಂಪೂರ್ಣ ಜಖಂಗೊಂಡ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ವಿಜಯಪುರ ಬಡಾವಣೆಯ ನಿವಾಸಿ ಅಂಕಿಲ್(45) ಮೃತ ದುರ್ದೈವಿಚಾಲಕ. ಜೈಪುರ ಸಮೀಪದ ಬಸವಿಕಟ್ಟೆಯಿಂದ ಕಾಫಿ ಬೀಜದ ಮೂಟೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಬಾಳೆಹೊನ್ನೂರು ಬಳಿಯ ಸಿಗೂಡು ತಿರುವಿನಲ್ಲಿ ಬರುವಾಗ ಇದ್ದಕ್ಕಿದ್ದಂತೆ ಭಾರೀ ಗಾತ್ರದ ಮರ ಲಾರಿಯ ಮೇಲೆ ಬಿದ್ದಿದೆ. ಒಳಗೆ ಸಿಕ್ಕಿಕೊಂಡ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಿದ್ದ ಕ್ಲೀನರ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆಗೆ ಅಡ್ಡಲಾಗಿ ಮರ ಇದ್ದ ಕಾರಣ ಈ ಮಾರ್ಗದಲ್ಲಿ 2 ಗಂಟೆಗಳ ಕಾಲ ಸಂಚಾರ ಅಸ್ಥವ್ಯಸಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರಾಜಶೇಖರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಂಚಾರ ಅಸ್ಥವ್ಯಸ್ಥ: ಮಡಿಕೇರಿ-ಸೋಮವಾರಪೇಟೆ ನಡುವಿನ ಉದಯಗಿರಿ ಗ್ರಾಮದ ಬಳಿ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಕಳೆದ ರಾತ್ರಿಯಿಂದ ಈ ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡಿತ್ತು. ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿಗಳು ಮರವನ್ನು ಕಡಿದು, ಸರಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.