ನವದೆಹಲಿ,ಜೂ.22: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕಳ್ಳಾಟದ ದೊರೆ ಲಲಿತ್ ಮೋದಿಗೆ ವೀಸಾ ನೆರವು ನೀಡಿದ ಹಗರಣದಲ್ಲಿ ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೇ ಎಂಬ ಘಟಾನುಘಟಿಗಳು ಸಿಲುಕಿ ತೊಳಲಾಡುತ್ತಿರುವ ಬೆನ್ನಲ್ಲೇ ಈ ‘ಲಲಿತ್ ಗೇಟ್’ ಪಾಪದ ಉರುಳು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೊರಗಳಿಗೂ ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸತೊಡಗಿವೆ.
ಐಪಿಎಲ್ ಬೆಟ್ಟಿಂಗ್ ದೊರೆ ಲಲಿತ್ ಮೋದಿ ಈಗ ಹೊಸದಾಗಿ ತನ್ನ ಮೇಲಿನ ಆರೋಪ ಕುರಿತಂತೆ ಸಾಮಾಜಿಕ ಜಾಲ ತಾಣದಲ್ಲಿ ಪ್ರತ್ಯಕ್ಷನಾಗಿದ್ದು, ಪ್ರಮುಖವಾಗಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಇತರ ರಾಜಕೀಯ ನಾಯಕರ ವಿರುದ್ದ ಚಾಟಿ ಬೀಸಿದ್ದಾನೆ.
ಜೇಟ್ಲಿ ವಿರುದ್ದ ನೇರವಾಗಿ ಆರೋಪ ಮಾಡಿರುವ ಲಲಿತ್ ಮೋದಿ, ಅರುಣ್ ಜೇಟ್ಲಿಯವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ಗಳ ಹಗರಣದಲ್ಲಿ ಅವರ ದೂರವಾಣಿ ಸಂಭಾಷಣೆ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾನೆ.
ಖಂಡಿತ ನಾವು ಯಾವುದೇ ಶಿಕ್ಷೆ ಎದುರಿಸಲು ಸಿದ್ಧ. ಆದರೆ ಯಾವುದೇ ರಾಜಕೀಯ ಒತ್ತಡಗಳು ಕೆಲಸ ಮಾಡಬಾರದು ಎಂದು ಮೋದಿ ಖಾರವಾಗಿ ಹೇಳಿದ್ದಾರೆ. ಈ ಮಧ್ಯೆ ವಿತ್ತ ಮಂತ್ರಿ ಜೇಟ್ಲಿ ಅವರು, ಈ ಬಗ್ಗೆ ಹೇಳಿಕೆ ನೀಡಿ, ಲಲಿತ್ ಮೋದಿಯವರು ವಸುಂಧರ ರಾಜೇ ಅವರ ಪುತ್ರನಿಂದ 11 ಕೋಟಿ ರೂ.(ವ್ಯವಹಾರ ರೂಪದಲ್ಲಿ ) ಪಡೆದಿದ್ದ ಬಗ್ಗೆ ಪ್ರಸ್ತಾಪಿಸಿದ್ದರು.