ಬೆಂಗಳೂರು, ಜೂ.19-ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷದ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆ ನೀಡಿದರು. ಪ್ರದರ್ಶನಕ್ಕೆ ಸಜ್ಜಾಗಿ ಕೃಷ್ಣ ಫ್ಲೋರ್ಮಿಲ್ ಸಮೀಪ ಪಕ್ಷದ ಕಚೇರಿ ಕಟ್ಟಡ
ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಂದು ಆಷಾಢ ಮಾಸದ ಮೊದಲ ಏಕಾದಶಿ, ಅಧಿಕ ಆಷಾಡ, ಜೊತೆಗೆ ಮಳೆಯೂ ಬರುತ್ತಿದೆ ಹಾಗಾಗಿ ಇವತ್ತೇ ಭೂಮಿ ಪೂಜೆ ನೆರವೇರಿಸುತ್ತಿದ್ದೇವೆ. ಇದೆಲ್ಲ ರಾಜಕೀಯದಲ್ಲಿ ವಿಶ್ವಾಸಗಳಿಸುವ ಧ್ಯೋತಕದಂತಿದೆ ಎಂದು ಹೇಳಿದರು. ಇದೆಲ್ಲಾ ಪಕ್ಷದ ಕಾರ್ಯಕರ್ತರು, ಮುಖಂಡರು ಮಾಡುತ್ತಿರುವ ಕೆಲಸ. ನಾನು ತಿರುಪತಿಗೆ ಹೋಗಿ ಬಂದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಹೇಳಿದರು.
ಈಗಾಗಲೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸಿದ್ದೇವೆ. ಇನ್ನೇನು ಬಿಬಿಎಂಪಿ ಚುನಾವಣೆ ಬರುತ್ತದೆ, ಇದರಲ್ಲಿ ನಮ್ಮ ಪಕ್ಷದ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು. ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಪಕ್ಷದ ಕಚೇರಿ ಕಟ್ಟುವುದು ಎಲ್ಲರ ಜವಾಬ್ದಾರಿ. ರಾಷ್ಟ್ರೀಯ ಅಧ್ಯಕ್ಷರ ಆಣತಿಯಂತೆ ಕಾರ್ಯಕರ್ತರು, ಮುಖಂಡರು ನಾವೆಲ್ಲರೂ ಸೇರಿ ಕಚೇರಿ ಕಟ್ಟುತ್ತಿದ್ದೇವೆ. ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷದ ಸಾಮರ್ಥ್ಯವನ್ನು ತೋರಿಸುತ್ತೇವೆ ಎಂದು ತಿಳಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ 10 ಲಕ್ಷ ರೂ., ಶಾಸಕ ಅಖಂಡ ಶ್ರೀನಿವಾಸಮೂರ್ತಿ 5 ಲಕ್ಷ, ಚೌಡಾರೆಡ್ಡಿ 10 ಲಕ್ಷ, ಬಿಬಿಎಂಪಿ ಜೆಡಿಎಸ್ ಗುಂಪಿನ ನಾಯಕ ಆರ್.ಪ್ರಕಾಶ್ 5 ಲಕ್ಷ ರೂ.ಗಳನ್ನು ಕಚೇರಿ ಕಟ್ಟಲು ನೀಡಿದರು.