ಬೆಂಗಳೂರು, ಜೂ.19: ಚಲನಚಿತ್ರ ನಟ , ವಸತಿ ಸಚಿವ ಅಂಬರೀಶ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ನಿನ್ನೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂಬರೀಶ್ ಅವರನ್ನು ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಾ.ರವೀಶ್ ಅವರು ಅಂಬರೀಶ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಪತ್ನಿ ಸುಮಲತಾ ಅವರು ಅಂಬರೀಶ್ ಜೊತೆಯಲ್ಲಿದ್ದಾರೆ. ಅಂಬರೀಶ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಆತಂಕವಿಲ್ಲ ಎಂದು ಸುಮಲತಾ ತಿಳಿಸಿದ್ದಾರೆ. ಈ ಹಿಂದೆ ಅನಾರೋಗ್ಯದ ನಿಮಿತ್ತ ಸಿಂಗಾಪೂರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದರು. ಇದೀಗ ಮತ್ತೆ ಉಸಿರಾಟದ ತೊಂದರೆಯಿಂದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಬರೀಶ್ ಅವರ ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅಂಬರೀಶ್ ಶೀಘ್ರ ಗುಣಮುಖರಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.