ಬೆಂಗಳೂರು, ಜೂ.17: ನಗರದ ಆತ್ಮಲಿಂಗೇಶ್ವರ ದೇವಸ್ಥಾನದ ಬೀಗವನ್ನು ನಕಲಿ ಕೀ ಬಳಸಿ ತೆಗೆದು ಹುಂಡಿ ದೋಚಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಫ್ಡಿಐ ಲೇಔಟ್ನಲ್ಲಿ ಆತ್ಮಲಿಂಗೇಶ್ವರ ದೇವಸ್ಥಾನವಿದ್ದು, ರಾತ್ರಿ ಚೋರರು ಈ ದೇವಸ್ಥಾನದ ಬೀಗವನ್ನು ಒಡೆದಿದ್ದಾರೆ. ಒಳನುಗ್ಗಿ ಅಪಾರ ಹಣವಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಇಂದು ಮುಂಜಾನೆ ಎಂದಿನಂತೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಬೀಗ ತೆರೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಹುಂಡಿ ನಾಪತ್ತೆಯಾಗಿತ್ತು. ಸ್ಥಳದಲ್ಲಿ ಬೀಗ, ಬೀಗದ ಕೈ ಬಿದ್ದಿರುವುದನ್ನು ಗಮನಿಸಿ ತಕ್ಷಣ ಬ್ಯಾಟರಾಯನಪುರ ಪೊಲೀಸರಿಗೆ ತಿಳಿಸಿದ್ದಾರೆ. ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.