ಚಳ್ಳಕೆರೆ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೇವಲ 1 ಮತದ ಅಂತರದಿಂದ ಪರಾಭವಗೊಂಡ ಅಭ್ಯರ್ಥಿಯೋರ್ವರು ಮತ ಎಣಿಕೆ ಸಿಬ್ಬಂದಿ ತಾರತಮ್ಯವೆಸಗಿದ್ದಾರೆಂದು ಆರೋಪಿಸಿ ವಿಷದ ಬಾಟಲಿಯೊಂದಿಗೆ ಚುನಾವಣಾ ಶಾಖೆಗೆ ಬಂದು ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಬಲ್ಲನಾಯಕನ ಹಟ್ಟಿ ಚುನಾವಣೆಯಲ್ಲಿ ಪಾಲಯ್ಯ ಎಂಬವರು ಸ್ಪರ್ಧಿಸಿದ್ದರು. ಮತ ಎಣಿಕೆ ವೇಳೆ ಪಾಲಯ್ಯನವರಿಗೆ 195 ಮತಗಳು ಬಂದಿದ್ದರೆ ಎದುರಾಳಿ ಅಭ್ಯರ್ಥಿ ತಿಪ್ಪೇಸ್ವಾಮಿಗೆ 196 ಮತ ಲಭಿಸಿದ್ದವು. ಈ ವೇಳೆ ಪಾಲಯ್ಯ ಪರ ಚುನಾವಣಾ ಏಜೆಂಟರಾಗಿದ್ದ ಶಿವಣ್ಣ ಎಂಬವರು ಮರು ಮತ ಎಣಿಕೆಗೆ ಒತ್ತಾಯಿಸಿದರೂ ಅದಕ್ಕೊಪ್ಪದ ಸಿಬ್ಬಂದಿ ತಿಪ್ಪೇಸ್ವಾಮಿಯನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರದಂದು ವಿಷದ ಬಾಟಲಿಯೊಂದಿಗೆ ಚುನಾವಣಾ ಶಾಖೆಗೆ ಆಗಮಿಸಿದ್ದ 1 ಮತದ ಅಂತರದಲ್ಲಿ ಸೋತ ಅಭ್ಯರ್ಥಿ ಪಾಲಯ್ಯ, ಚುನಾವಣೆಯಲ್ಲಿ ಮೋಸ ಮಾಡಿದ್ದೀರಾ ಎಂದು ಆರೋಪಿಸಿದರಲ್ಲದೇ ನ್ಯಾಯ ದೊರಕಿಸಿಕೊಡದಿದ್ದರೆ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು. ನಂತರ ಅವರನ್ನು ಸಮಾಧಾನಪಡಿಸಿ ಕಳುಹಿಸಿದ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.