ಕರ್ನಾಟಕ

ರಾಜ್ಯದ ಹಲವೆಡೆ ಮಳೆ ಆರ್ಭಟ: ರೈತರ ಮೊಗದಲ್ಲಿ ಸಂತಸ; ನೈರುತ್ಯ ಮಾನ್ಸೂನ್ ವಿಳಂಬವಾದರೂ ರೈತರ ಮೊಗದಲ್ಲಿ ಸಂತಸ

Pinterest LinkedIn Tumblr

rain

ಬೆಂಗಳೂರು: ನೈರುತ್ಯ ಮುಂಗಾರು ಜೂನ್ ಮೂರರ ಒಳಗೆ ರಾಜ್ಯ ಪ್ರವೇಶಿಸುತ್ತದೆ ಎಂದು ಕೇರಳದ ಹವಾಮಾನ ಇಲಾಖೆ ಹೇಳಿದೆ. ಶನಿವಾರವಷ್ಟೇ ನಾಲ್ಕು ದಿನ ತಡವಾಗಬಹುದು ಎಂಬ ಮುನ್ಸೂಚನೆ ದೊರೆತಿತ್ತು. ಮುಂಗಾರು ತಡವಾದರೂ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಲವು ದಿನಗಳಿಂದ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ಅನ್ನದಾತರ ಮೊಗದಲ್ಲಿ ಸಂತಸ ತಂದಿದೆ.
ಈ ಮಧ್ಯೆ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿರುವ ಉತ್ತರ ಭಾರತದ ಪಂಜಾಬ್, ಹರಿಯಾಣಾ, ದಿಲ್ಲಿ, ಉತ್ತರ ರಾಜಸ್ಥಾನ ಹಾಗೂ ಪಶ್ಚಿಮ ಉತ್ತರಪ್ರದೇಶಗಳಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. ಈ ರಾಜ್ಯಗಳಲ್ಲಿ ಜೂನ್ 1-3ರ ನಡುವೆ ಗುಡುಗು, ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಸಿಗಾಳಿ ಹೊಡೆತಕ್ಕೆ ಸಾವಿರಾರು ಜನ ಸತ್ತಿದ್ದರು ಎಂಬುದು ಗಮನಾರ್ಹ.

ಮುಂದುವರೆದ ಆರ್ಭಟ ಭಾನುವಾರ ಬೆಂಗಳೂರು ಸೇರಿದಂತೆ ಕೊಪ್ಪಳ, ಮಂಡ್ಯ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಉಳಮೇಶ್ವರದಿನ್ನಿ ಗ್ರಾಮದ ಬಳಿ, ಸಿಡಿಲು ಬಡಿದು ಯಲ್ಲಮ್ಮ ಅಮರಪ್ಪ (25) ಎಂಬವರು ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಮುಳಗುಂದದಲ್ಲಿ ಆಶ್ರಯ ಪ್ಲಾಟ್ ಬಳಿ ಶ್ರೀಕಾಂತ ಶಿವಲಿಂಗಪ್ಪ ಕುತ್ನಿ (22) ಎಂಬ ಯುವಕ ಮೃತಪಟ್ಟಿದ್ದಾನೆ. ಬಳ್ಳಾರಿಯ 31ನೇ ವಾರ್ಡ್ ಭತ್ರಿ ಭಾಗ ಮತ್ತಿತರೆಡೆ, ಬಿರುಗಾಳಿ-ಮಳೆಗೆ ಕೆಲವು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

12ರ ನಂತರ ಹೆಚ್ಚು ಮಳೆ ”ಬಂಗಾಳಕೊಲ್ಲಿ ಇಲ್ಲವೇ ಶ್ರೀಲಂಕಾದಲ್ಲಿ ವಾಯುಭಾರ ವ್ಯತ್ಯಾಸಗಳಾದರೆ ಭಾರತಕ್ಕೆ ಜೂ.1ಕ್ಕೆ ಕೇರಳ ಮೂಲಕ ಮುಂಗಾರಿನ ಪ್ರವೇಶ ಆಗುತ್ತಿತ್ತು. ಆದರೀಗ ಅರಬ್ಬೀ ಸಮುದ್ರದಲ್ಲಿ ವಾಯುಭಾರ ವ್ಯತ್ಯಾಸ ಆಗಿರುವುದರಿಂದ ಗಾಳಿ ವಿರುದ್ಧ ದಿಕ್ಕಿಗೆ ಚಲಿಸುತ್ತಿದೆ. ಇದರಿಂದ ಮುಂಗಾರು ಮಾರುತಗಳು ಶ್ರೀಲಂಕಾ ಆಸುಪಾಸಿನಲ್ಲಿಯೇ ಸ್ಥಗಿತಗೊಂಡಿವೆ. ಜೂನ್ ಮೊದಲ ವಾರ ಮುಗಿಯುವರೊಳಗೆ ಕೇರಳಕ್ಕೆ ಮತ್ತು ಕರ್ನಾಟಕಕ್ಕೆ ಆಗಮಿಸಬಹುದು. ಆದರೆ, ಆರಂಭದಲ್ಲಿ ಮಳೆ ಮೋಡಗಳು ದುರ್ಬಲವಾಗಿರುತ್ತವೆ. ಜೂ. 12ರ ನಂತರ ಹೆಚ್ಚಿನ ಮಳೆಯ ನಿರೀಕ್ಷೆ ಇದೆ,” ಎಂದು ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ವಿ.ಎಸ್. ಪ್ರಕಾಶ್ ಹೇಳಿದ್ದಾರೆ.

”ವಾಯು ಚಲನೆ ಈ ಬಾರಿ ಬಹಳ ಏರುಪೇರಾಗಿದೆ. ವೈಜ್ಞಾನಿಕ ಸಮೂಹದಲ್ಲಿ ಸಾಕಷ್ಟು ಜಿಜ್ಞಾಸೆಗಳಿದ್ದರೂ ಒಟ್ಟಾರೆ ಅಭಿಪ್ರಾಯ ಈ ಬಾರಿಯ ಮುಂಗಾರು ತಡವಾಗಿ ಆಗಮಿಸುತ್ತದೆ ಮತ್ತು ದೇಶದಲ್ಲಿ ವಾಡಿಕೆಯಷ್ಟು ಮಳೆಯಾಗದೆ ಅನಾವೃಷ್ಟಿ ಎದುರಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಆದರೆ, ಕರ್ನಾಟಕದ ವಿಷಯಕ್ಕೆ ಬಂದಾಗ ಇಲ್ಲಿ ವಾಡಿಕೆಯಷ್ಟು ಮಳೆಯಾಗುತ್ತದೆ. ರಾಜ್ಯಕ್ಕೆ ಅನಾವೃಷ್ಟಿಯ ಭಯ ಅಷ್ಟಾಗಿ ಇಲ್ಲ,” ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜೂ.ಎರಡನೇ ವಾರ ಅಂದರೆ 12ರ ನಂತರ ಮಳೆ ಪ್ರಬಲವಾಗುವ ಲಕ್ಷಣ ಇವೆ. ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತದೆ. ಆದರೆ, ಆಂಧ್ರಪ್ರದೇಶದ ವಿದರ್ಭ ಪ್ರಾಂತ್ಯದಲ್ಲಿ ಈ ಬಾರಿ ಮಳೆ ಕೊರತೆ ಇರುವುದರಿಂದ ಅದರ ಪ್ರಭಾವ ರಾಜ್ಯದ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಮೇಲೂ ಬೀರುವ ಆತಂಕವೂ ಇದೆ. ಆರಂಭದ ಜೂನ್‌ನಲ್ಲಿ ಕೊಂಚ ಏರುಪೇರಾದರೂ ಜುಲೈ ಮತ್ತು ಆಗಸ್ಟ್‌ನಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ. ಮುಂಗಾರಿನ ಅವಧಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ ರಾಜ್ಯದಾದ್ಯಂತ ವಾಡಿಕೆಯಷ್ಟು ಮಳೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ ಸಕಲೇಶಪುರ ತಾಲೂಕಿನಲ್ಲಿ ಅತಿಹೆಚ್ಚು 215 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಹಾಸನ 33 ಮಿ.ಮೀ., ಕಡೂರು 30.5 ಮಿ.ಮೀ., ಸಿಂಧನೂರು 30 ಮಿ.ಮೀ., ಶಹಪುರ 13 ಮಿ.ಮೀ., ಬಂಗಾರಪೇಟೆ 23.5 ಮಿ.ಮೀ., ಮುಳಬಾಗಿಲು 19 ಮಿ.ಮೀ., ಆಳಂದ 13 ಮಿ.ಮೀ., ತಿಪಟೂರು 38.5 ಮಿ.ಮೀ. ಸೇರಿದಂತೆ ಹಲವೆಡೆ ಮಳೆಯಾದ ಬಗ್ಗೆ ವರದಿಯಾಗಿದೆ.

ಇನ್ನೂ ಎರಡು ದಿನ ಮಳೆ ಸದ್ಯ ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ವ್ಯತ್ಯಾಸದಿಂದಾಗಿ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ತಡ ಏಕೆ? ತಜ್ಞರು ಹೇಳುವಂತೆ, ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಳ್ಳುವ ಈಶಾನ್ಯ ಮಾನ್ಸೂನ್ ಮಾರುತಗಳು ನೈಋತ್ಯದ ಕಡೆ ಮುಖ ಮಾಡಿದರೆ ಮಾತ್ರ ಮುಂಗಾರು ಕೇರಳದ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಆದರೆ ಈ ವರ್ಷ ಅರಬ್ಬಿ ಸಮುದ್ರದಲ್ಲಿ ನೈಋತ್ಯ ದಿಕ್ಕಿಗೆ ಬೀಸುವ ಮಾರುತಗಳೇ ಇನ್ನೂ ಎದ್ದಿಲ್ಲ. ಬದಲಾಗಿ, ಕೇರಳ ಮತ್ತು ಕರ್ನಾಟಕ ಕರಾವಳಿಗೆ ಹೊಂದಿಕೊಂಡಂತೆ ಅರಬ್ಬಿ ಸಮುದ್ರದಲ್ಲಿ ಪ್ರತಿಚಕ್ರವಾತ (ಆ್ಯಂಟಿ ಸೈಕ್ಲೋನ್) ಬೀಸುತ್ತಿದೆ. ಇದು ಮುಂಗಾರಿನ ವೈರಿ. ಈ ಆ್ಯಂಟಿ ಸೈಕ್ಲೋನ್‌ಗಳು ತಣ್ಣಗಾಗಿ ನೈಋತ್ಯ ಮಾರುತಗಳು ಅಬ್ಬರಿಸಿ ಏಳುವವರೆಗೂ ಮುಂಗಾರು ಮಳೆ ಇಲ್ಲ ಎನ್ನುತ್ತಾರೆ ತಜ್ಞರು.

Write A Comment