ಬೆಂಗಳೂರು: ಪ್ರತಿದಿನ ಕುಡಿದು ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಗಂಡನ ದುರ್ವರ್ತನೆಯಿಂದ ರೋಸಿ ಹೋದ ಪತ್ನಿಯೊಬ್ಬಳು ಆತನನ್ನು ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿ ನಾಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಗೋಪಾಲ ನಗರದ ಬಳಿಯ ಚೌಡೇಶ್ವರಿ ನಗರದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ವಿಜಯ್ ಕುಮಾರ್(38) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಆತ ಪ್ರತಿದಿನ ಕುಡಿದುಕೊಂಡು ಬಂದು ಪತ್ನಿ ಮಲ್ಲೇಶ್ವರಿ ಮತ್ತು ಮೂವರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ.
ದಿನನಿತ್ಯದಂತೆ ಗುರುವಾರ ಕೂಡ ಕುಡಿದು ಬಂದು ಗಲಾಟೆ ಮಾಡಿದ. ಈ ಸಮಯದಲ್ಲಿ ಕೋಪದ ತೀವೃತೆಯಲ್ಲಿ ಗಂಡನ ತಲೆಗೆ ಕಲ್ಲಿನಿಂದ ಜಜ್ಜಿ ಕೊಂದ ಪತ್ನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಮನೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾಳೆ.
ಮನೆ ಒಳಗಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲ ನಗರದ ಪೊಲೀಸರು ಮಲ್ಲೇಶ್ವರಿಗಾಗಿ ಶೋಧ ನಡೆಸಿದ್ದಾರೆ.