ಬೆಂಗಳೂರು,ಮೇ 18: ಮುಖ್ಯಮಂತ್ರಿ ಸಿದ್ಧರಾಮಯ್ಯ ಸೊಕ್ಕಿನ ಸ್ವಭಾವದವರು. ಅವರ ಹಗುರವಾದ ಮಾತುಗಳು ಶೋಭೆ ತರುವಂತದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ಅಂತಹ ನಡವಳಿಕೆ ಅವರಿಗೆ ತಕ್ಕದ್ದಲ್ಲ ಎಂದರು. ಪ್ರಧಾನಿ ಮೋದಿಯವರ ಸಾಧನೆ ಕುರಿತಂತೆ ಸವಾಲು ಹಾಕಿದ್ದಾರೆ. ಬೇಕಿದ್ದರೆ ಪ್ರೆಸ್ಕ್ಲಬ್ನಲ್ಲೇ ಬಹಿರಂಗ ಚರ್ಚೆಗೆ ಬರಲಿ. ಚರ್ಚಿಸಲು ನಾವು ಸಿದ್ಧ ಎಂದು ಸವಾಲು ಹಾಕಿದರು. ದಾವಣಗೆರೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಹೇಳದೆ, ಬಿಜೆಪಿಯನ್ನು ಟೀಕೆ ಮಾಡಲು ಬಳಸಿಕೊಂಡರು. ಅವರ ಸರ್ಕಾರದ ಸಾಧನೆ ಶೂನ್ಯ. ಹಾಗಾಗಿಯೇ ಅದರ ಬಗ್ಗೆ ಹೇಳಿಕೊಂಡೇ ಇಲ್ಲ ಎಂದು ಟೀಕಿಸಿದರು.
ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರದ ಸಾಧನೆಯನ್ನು ನಾವು ಸವಾಲು ಮಾಡುತ್ತೇವೆ. ಅದರ ಬಗ್ಗೆ ಚರ್ಚೆ ನಡೆಸಲು ಸಿದ್ದರಿದ್ದೇವೆ. ರಾಜ್ಯದಲ್ಲಿ ಯಾವ ಸರ್ಕಾರ ದುರಾಡಳಿತ ನಡೆಸಿದೆ ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅದಕ್ಕೆ ಪಾಠವನ್ನು ಕಲಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇಂದ್ರದಲ್ಲಿ ಧೂಳಿಪಟವಾಗಿರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲೂ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಸರ್ಕಾರ ಮಾಡಿರುವ ಕೊಳೆಯನ್ನು ನಮ್ಮ ಸರ್ಕಾರ ಹಂತ ಹಂತವಾಗಿ ತೊಳೆಯುತ್ತಿದೆ ಎಂದರು.